सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಬಿದಿರಿನ ಸಹಾಯದಿಂದ ಸೌಂದರ್ಯದ ಜೀವನ.

ಶ್ರೀ ಸುಬ್ರಾಯ ನಂದೋಡಿ | ದಕ್ಷಿಣ

parivartan-img

ಮುಳುಗುವವರಿಗೆ ಹುಲ್ಲು ಕಡ್ಡಿಯ ಆಸರೆ ಎನ್ನುವಂತೆ ಕಚ್ (ಗುಜರಾತ್) ನಲ್ಲಿನ ಮಾರಣಾಂತಿಕ ಭೂಕಂಪದಿಂದ ಅಲ್ಲಾಡಿದ ಜನಜೀವನಕ್ಕೆ ಸಹಾಯ ದೊರೆತುದು ಬಿದಿರಿನಿಂದ. ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಅರಣ್ಯ ಪ್ರದೇಶವಾದ ಮೆಲಘಾಟ್‌ನ ಲವಾಡದಲ್ಲಿರುವ ಕೇಂದ್ರದಲ್ಲಿ ಸುನಿಲ್ ದೇಶಪಾಂಡೆ ಮತ್ತು ಅವರ ಪತ್ನಿ ನಿರುಪಮಾ ದೇಶಪಾಂಡೆ, ಸಂಘದ ಸ್ವಯಂಸೇವಕರ ಸಹಾಯದಿಂದ ಕಚ್‌ನ ವನವಾಸಿ ಪ್ರದೇಶಗಳಲ್ಲಿ ಸಿಗುವ ಬಿದಿರು ಭೂಕಂಪದ ಸಂತ್ರಸ್ತರಿಗೆ ಸಂಜೀವಿನಿಯಾಗುವಂತೆ ಮಾಡಿದರು.

26 ಜನವರಿ 2001 ರಂದು ಗುಜರಾತ್‌ನಲ್ಲಿ ಸಾವಿರಾರು ಜನರು ನಿರಾಶ್ರಿತರಾದ ಭೀಕರ ಭೂಕಂಪವನ್ನು ಯಾರೂ ಮರೆತಿರಲಾರರು. ತಮ್ಮ ಮನೆಗಳ ಭಗ್ನಾವಶೇಷದಿಂದ ದೂರ ಸರಿಯಲು ಇಷ್ಟವಿಲ್ಲದ ಪರಿಸ್ಥಿತಿ ಅಲ್ಲಿನ ಜನರದಾಗಿತ್ತು. ಕೆಲವರ ಚಿನ್ನ, ಕೆಲವರ ಆಭರಣಗಳು, ಕೆಲವರ ಆಸ್ತಿ, ಕಾಗದ ಪತ್ರಗಳು ಮತ್ತು ಇತರ ಅಮೂಲ್ಯ ವಸ್ತುಗಳು ಅವಶೇಷಗಳಲ್ಲಿ ಹೂಳಲ್ಪಟ್ಟಿತ್ತು. ಆಡಳಿತ ಯಂತ್ರದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಜನರು ಅವಶೇಷಗಳಿಂದ ಒಂದು ಇಂಚು ಸಹ ಚಲಿಸಲು ಸಿದ್ಧರಿರಲಿಲ್ಲ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ 45 ಜನರ ತಂಡ ಸುನಿಲ್ ಅವರೊಂದಿಗೆ ಕಚ್ ತಲುಪಿತು.

ಈ ತಂಡವು ಒಂದು ವರ್ಷ ಅಲ್ಲಿಯೇ ಇದ್ದು ಸ್ಥಳೀಯ ಸ್ವಯಂಸೇವಕರ ಸಹಾಯದಿಂದ ಸಂತ್ರಸ್ತರ ಕುಟುಂಬಗಳಿಗೆ ಬಿದಿರಿನ ಗುಡಿಸಲು ನಿರ್ಮಿಸುವ ಅದ್ಭುತ ಕೆಲಸ ಮಾಡಿತು. ಬಿದಿರಿನಿಂದ ನಿರ್ಮಿಸಲಾದ ಆಸ್ಪತ್ರೆಗಳು ಮತ್ತು ಶಾಲೆಗಳು ಸೇರಿದಂತೆ ಈ 742 ಭೂಕಂಪ ವಿರೋಧಿ ಕಟ್ಟಡಗಳನ್ನು ಅಂದಿನ ಸರಸಂಘಚಾಲಕರಾದ ಪೂಜನೀಯ ಸುದರ್ಶನ್ ಜೀಯವರು ಲೋಕಾರ್ಪಣೆ ಮಾಡಿದರು.

ಒಂದು ಕಾಲದಲ್ಲಿ ಚಿತ್ರಕೂಟದಲ್ಲಿ ನಾನಾಜಿಯವರ ಸಹಚರರಾಗಿದ್ದ ಸುನಿಲ್ ದೇಶಪಾಂಡೆ ಮತ್ತು ಅವರ ಪತ್ನಿ ನಿರುಪಮಾ ಅವರು ಒಳನಾಡು ಪ್ರದೇಶಗಳಲ್ಲಿ ನೆಲೆಸಿದ ವನವಾಸಿಗಳ ನಡುವೆ ಕೆಲಸ ಮಾಡುವ ಮೂಲಕ ಅವರನ್ನು ಆತ್ಮನಿರ್ಭರರನ್ನಾಗಿ ಮಾಡಲು ಬಯಸಿದ್ದರು. ಇದಕ್ಕಾಗಿ ಅವರು ಬಿದಿರನ್ನು ಆರಿಸಿಕೊಂಡರಲ್ಲದೆ ಈ ಪ್ರದೇಶದ ವನವಾಸಿಗಳ ಸ್ಥಿತಿ ಮತ್ತು ದಿಕ್ಕನ್ನು ಸುಧಾರಿಸಲು, ಬಿದಿರು ಕೇಂದ್ರವನ್ನು 1994 ರಲ್ಲಿ ಮಹಾರಾಷ್ಟ್ರದ ಮೆಲ್ಘಾಟಿನ ಲವಾಡಾದಲ್ಲಿ ಸ್ಥಾಪಿಸಿದರು. ಇಂದು ಈ ಕೇಂದ್ರವು ವನವಾಸಿಗಳ ಕ್ಷೇತ್ರದಲ್ಲಿ ಅವರ ಏಳಿಗೆಗಾಗಿ ಅಭೂತಪೂರ್ವ ಕೆಲಸಗಳನ್ನು ಮಾಡುತ್ತಿದೆ.

ಈ ಪ್ರದೇಶದ 38 ಹಳ್ಳಿಗಳಲ್ಲಿ 250 ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳ ಸಹಾಯದಿಂದ ಬಿದಿರಿನಿಂದ ತಯಾರಿಸಿದ ಉತ್ಪನ್ನಗಳನ್ನು ಈ ಸಂಸ್ಥೆಯು ಮಾರಾಟ ಮಾಡಿ ನೂರಾರು ವನವಾಸಿಗಳಿಗೆ ಸಂತೋಷದ ಜೀವನವನ್ನು ನೀಡಿದೆ. ಬಿದಿರಿನಿಂದ ಅನೇಕ ರೀತಿಯ ಕರಕುಶಲ ವಸ್ತುಗಳ ತಯಾರಿ ಮತ್ತು ಕಟ್ಟಡ ನಿರ್ಮಾಣ ಕಾರ್ಯಗಳ ವಿಸ್ತಾರದಿಂದಾಗಿ ಈ ಪ್ರದೇಶದಲ್ಲಿ ಆತ್ಮನಿರ್ಭರತೆಯ ಗ್ರಾಫ್ ನಿರಂತರವಾಗಿ ಮೇಲೇರುತ್ತಿದೆ.

"ಈ ಬುಡಕಟ್ಟು ಜನಾಂಗದವರಲ್ಲಿ ಸಕಾರಾತ್ಮಕತೆಯನ್ನು ತರುವುದು ಮತ್ತು ಅವರನ್ನು ಸಮರ್ಥರನ್ನಾಗಿ ಮತ್ತು ಆತ್ಮನಿರ್ಭರರನ್ನಾಗಿ ಮಾಡುವುದು ನಮ್ಮ ಪ್ರಯತ್ನ" ಎಂದು ಸುನಿಲ್ ದೇಶಪಾಂಡೆಯವರು ಹೇಳುತ್ತಾರೆ. ಉದಾಹರಣೆಗೆ, ಭಿಲ್ ಸಮುದಾಯಕ್ಕೆ ಸೇರಿದ ಗೊರೆಲಾಲ್ ಅಹ್ರಿಯಾ ಅವರನ್ನು ತೆಗೆದುಕೊಳ್ಳೋಣ......

ಇವರು ಅಷ್ಟವಕ್ರ. ಇವರ ದೇಹದ ಎಂಟು ಭಾಗಗಳು ವಕ್ರವಾಗಿವೆ. ಕಳೆದ 13 ವರ್ಷಗಳಿಂದ ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಕುಟುಂಬದ ಜವಾಬ್ದಾರಿಯನ್ನು ಹೊರಲು ಅಸಾಧ್ಯವಾದ ಕಾಲವೊಂದಿತ್ತು. ಆದರೆ ಇಂದು ಅವರು ಸ್ವತಃ ಎಷ್ಟು ಸಮರ್ಥರಾಗಿದ್ದಾರೆಂದರೆ ತಮ್ಮ ಇಡೀ ಕುಟುಂಬದ ಬೆನ್ನೆಲುಬೇ ಆಗಿ ಬಿಟ್ಟಿದ್ದಾರೆ. ಅಷ್ಟೇ ಅಲ್ಲ, ಅವರು ನಾಗಪುರದ 20 ಅಂಧರಿಗೆ ಬಿದಿರಿನ ಕಲಾಕೃತಿಯ ಬಗ್ಗೆ ತರಬೇತಿ ನೀಡುತ್ತಿದ್ದಾರೆ.

ಕೊರ್ಕು ಸಮುದಾಯದ ದಿವ್ಯಾಂಗ ಆಗಿರುವ ಪೋಲಿಯೋಗ್ರಸ್ತ ಸೊಹನ್ ಲಾಲ್ ಕಾಶ್ದೇಕರ್ ​​ಅವರದೂ ಇದೇ ರೀತಿಯ ಕಥೆಯಾಗಿದ್ದು, ಅವರು ಕಳೆದ 5 ವರ್ಷಗಳಿಂದ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂದು ಅವರು ಮತ್ತು ಗೋರೆಲಾಲ್ ಇಬ್ಬರೂ ಕೇಂದ್ರದ ಮುಖ್ಯ ತರಬೇತುದಾರರಾಗಿದ್ದಾರೆ. ಬಿದಿರಿನಿಂದ ಮನೆಗಳನ್ನು ನಿರ್ಮಿಸುವುದರ ಹೊರತಾಗಿ, ಈ ಕೇಂದ್ರವು ಇತರ ಕರಕುಶಲ ವಸ್ತುಗಳು ಮತ್ತು ಸಂಶೋಧನಾ ಕಾರ್ಯಗಳ ಬಗ್ಗೆಯೂ ವಿಶೇಷ ಗಮನ ಹರಿಸುತ್ತಿದೆ.

ವನವಾಸಿಗಳು ತಯಾರಿಸಿದ ಉತ್ಪನ್ನಗಳ ಮಾರಾಟ ವ್ಯವಸ್ಥೆ (Marketing) ಮತ್ತು ಬ್ರ್ಯಾಂಡಿಂಗ್ (Branding)ನ್ನು ವೇಣು ಶಿಲ್ಪಿ ಕೈಗಾರಿಕಾ ಸಹಕಾರಿ ಸಂಘದ ಮೂಲಕ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, ಬಿದಿರು ಕಾರ್ಯಾಗಾರಗಳ ತರಬೇತಿಗೆ ಶೈಕ್ಷಣಿಕ ಮಾನ್ಯತೆ ನೀಡುವುದರ ಹೊರತಾಗಿ, ಕೇಂದ್ರವು ಹೊಸ ಜಾತಿಯ ಬಿದಿರುಗಳ ಸಂಶೋಧನೆಗೂ ಚಾಲನೆ ನೀಡಿದೆ. ಆರ್ಥಿಕವಾಗಿ ಸ್ವಾವಲಂಬಿಯಾಗಲು ಹಾಗೂ ಸ್ವಚ್ಛ ಭಾರತ್ ಅಭಿಯಾನವನ್ನು ಯಶಸ್ವಿಗೊಳಿಸಲು ಬಿದಿರಿನ ಸ್ನಾನಗೃಹ ನಿರ್ಮಿಸುವ ಕಾರ್ಯಾಗಾರದ ಪ್ರಶಿಕ್ಷಣ ವರ್ಗದ ಕೊಡುಗೆ ಅಪಾರವಾಗಿದೆ.


ಸಂಪರ್ಕಿಸಿ:

ಸಹದೇವ ದಾದೂಜಿ: 9764634511

654 Views
अगली कहानी