सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಪ್ರಕೃತಿಯಿಂದ ದೊರೆತ ಆತ್ಮವಿಶ್ವಾಸ

ರೂಪಶ್ರೀ ನಾಗರಾಜ್ | ಜೋರ್ಹತ್ | ಅಸ್ಸಾಂ

parivartan-img

ಈ ಧ್ವನಿಗಳು ನಿಮಗೆ ಎಂದಾದರೂ ಕೇಳಿವೆಯಾ?

ನಮ್ಮ ಸುತ್ತಲಿನ ಮರಗಳು, ಅದರ ಎಲೆಗಳು, "ನಮ್ಮನ್ನು ಬಳಸಿ ತಟ್ಟೆ, ದೊನ್ನೆಗಳನ್ನು ಚಾಪೆಗಳನ್ನು ಮಾಡಿ" ಎಂದು ಹೇಳುವಂತೆ !

ಹೂಗಳು, "ನಮ್ಮಿಂದ ಮನೆ ಮಂದಿರ ಅಂಗಳಗಳನ್ನು ಸಿಂಗರಿಸಿ, ಹಬ್ಬಗಳನ್ನು ಆಚರಿಸಿಎಂದು ಹೇಳುವಂತೆ !

ಕಟ್ಟಿಗೆಗಳು, "ನುರಿತ ಕುಶಲಕರ್ಮಿಯಾಗು" ಎಂದು ಹೇಳುವಂತೆ !

ಈ ಜಗತ್ತು  ನಮ್ಮ ಕಲೆಗಳಿಗಾಗಿ ಕಾಯುತ್ತಿದೆ. ಈ ಮಣ್ಣು ಹೇಳುತ್ತದೆ, "ನನ್ನಿಂದ ಪಾತ್ರೆಗಳನ್ನು ಮಾಡು, ಅದರಿಂದ ಸಮಾಜ ಉಂಡು ಆನಂದಿಸಲಿ"!.

"ನಿನ್ನೊಳಗಿನ ಶಿಲ್ಪಕಾರ ನನ್ನನ್ನು ತನ್ನ ಕೆತ್ತನೆಯಿಂದ ಎಬ್ಬಿಸಿಲಿ" ಎಂದು ಈ ಪರ್ವತಗಳು ಹೇಳುವಂತೆ.!

ಈ ನಳನಳಿಸುತ್ತಿರುವ ಪ್ರಕೃತಿ! ಸ್ವಯಂ ಪರಿಪೂರ್ಣ ಹಾಗೂ ಆತ್ಮನಿರ್ಭರವಾಗಿ ಹೆಮ್ಮೆಯಿಂದ ಬೀಗುತ್ತಿದೆ. ಮಾತ್ರವಲ್ಲ, ಅದಕ್ಕಾಗಿಯೇ ಹೆಜ್ಜೆ ಹೆಜ್ಜೆಗೂ  ನಮಗೆ  ಆತ್ಮನಿರ್ಭರರಾಗುವುದು  ಹೇಗೆ? ಎಂಬುದನ್ನು ತಿಳಿಸುತ್ತಿದೆ.


 ಅಸ್ಸಾಂನ ಅದ್ಭುತವಾದ ಬ್ಯಾಂಬೂ ಕ್ರಾಫ್ಟ್ ಬಗ್ಗೆ ತಿಳಿಯೋಣ ಬನ್ನಿ. ಈ ಕಲೆಯನ್ನು ವನವಾಸಿಗಳ ಜೀವನಾಧಾರವಾಗಿ ಪರಿವರ್ತಿಸುವಲ್ಲಿ ಶ್ರಮಿಸಿದ ಸೇವಾಭಾರತಿಯು "ಪಾಂಚಜನ್ಯ ಗುಡಿ ಕೈಗಾರಿಕೆಯ ಮೂಲಕ 2022ರ ವರೆಗೆ 50 ಲಕ್ಷದ ವಹಿವಾಟು ನಡೆಸಿದೆ ಮತ್ತು 60ಕ್ಕೂ ಹೆಚ್ಚಿನ ಗ್ರಾಮಗಳಿಗೆ ಇದರಿಂದ ಲಾಭವಾಗಿದೆ. ಸಾವಿರಾರು ಕೈಗಳು ಬಿದಿರಿನ ಕಲಾತ್ಮಕ ವಸ್ತುಗಳನ್ನು ಮಾಡಿ ಸ್ಥಳೀಯ ಮಾರುಕಟ್ಟೆ, ಸೌರಾಷ್ಟ್ರ ಮೇಳ, ಟ್ರೇಡ್ ಫೇರ್, ಬಿಹೂ ಮಳಿಗೆ, ಅಸ್ಸಾಂ ಮೇಳ, ಮೊದಲಾದ ಪ್ರದರ್ಶನಗಳ ಲಾಭವನ್ನು ಪಡೆದು ತಮ್ಮ ಜೀವನದ ಉನ್ನತಿಯ ಮುಂಚೂಣಿಯಲ್ಲಿವೆ.

ಬಿದಿರಿನ ಕಲೆಯು ಇಲ್ಲಿನ ಪ್ರತಿಯೊಂದು ಮನೆಯ ಸಂಸ್ಕೃತಿ ಮತ್ತು ಪರಂಪರೆಯ ಅವಿಭಾಜ್ಯ ಅಂಗವಾಗಿದೆ. ಬಿದಿರಿನಿಂದ ಮಾಡಿದ ವಸ್ತುಗಳು ಹೊಸದಾಗಿ ತಯಾರಿಸಲ್ಪಟ್ಟು ಪ್ರದರ್ಶನಗಳಲ್ಲಿ ಸುಸಜ್ಜಿತವಾಗಿ ಜೋಡಿಸಲ್ಪಟ್ಟಾಗ ಅವುಗಳನ್ನು ನೋಡಿದವರ ಕಣ್ಣು ವಿಸ್ಮಯದಿಂದ ಬೆರಗಾಗುವುದಂತೂ ಸತ್ಯ. ಮಾನವನ ಬುದ್ಧಿಮತ್ತೆಯು ಒಂದು ವಿಶಾಲವಾದ ಕಲ್ಪನೆಗಳ ಆಗರವಾಗಿದೆ ಮತ್ತು ಈ ವಿಷಯವನ್ನು ಅವಿನಾಶ್ ಜೀ ಅವರಿಗಿಂತ ಚೆನ್ನಾಗಿ ಅರಿತಿರಲು ಬೇರೆ ಯಾರಿಗೆ ತಾನೇ ಸಾಧ್ಯ?

2009 ರಿಂದ ಸೇವಾಭಾರತಿಯೊಂದಿಗೆ ತಮ್ಮನ್ನು ಜೋಡಿಸಿಕೊಂಡಿರುವ ಜಿಲ್ಲಾ ಸಂಯೋಜಕರಾದ ಅವಿನಾಶ್ ಹಜಾರಿಕಾ ಅವರು ಸ್ವತ: ತಾವೇ ಬಿದಿರಿನ ವಸ್ತುಗಳನ್ನು ಮಾಡುವ ತರಬೇತಿಯನ್ನು ಪಡೆದು ಆತ್ಮನಿರ್ಭರರಾದರು. 2022ರ ವರೆಗೆ ಸಾವಿರಾರು ಜನರಿಗೆ ಬಿದಿರಿನ ಅನೇಕ ವಸ್ತುಗಳನ್ನು ತಯಾರಿಸುವ ತರಬೇತಿಯನ್ನೂ ನೀಡಿದರು.


ಈ ಕಾರ್ಯ ಪ್ರಾರಂಭವಾದಾಗ ಕೇವಲ ಏಳು ಅಥವಾ ಎಂಟು ವಸ್ತುಗಳು ಮಾತ್ರ ಮಾಡಲ್ಪಡುತ್ತಿದ್ದವು. ಆದರೆ ಈಗ ಅಸ್ಸಾಂನಲ್ಲಿ ನಡೆಯುವ ದೊಡ್ಡ ದೊಡ್ಡ ಪ್ರದರ್ಶನಗಳಲ್ಲಿ 20ಕ್ಕೂ ಹೆಚ್ಚಿನ ಪ್ರಕಾರಗಳ ವೈವಿಧ್ಯಮಯ ವಸ್ತುಗಳನ್ನು ಜನರು ನೋಡಬಹುದು. ಹೊಸ ಕಲಾವಿದರ ಹೊಸ ಸೃಜನಶೀಲತೆಯು ಮಿಳಿತವಾಗಿ  ಕಲ್ಪನೆಗೂ ಮೀರಿದ ಬಿದಿರಿನ ಅನೇಕ ವಸ್ತುಗಳು ಈಗ ಸಿದ್ಧಗೊಳ್ಳುತ್ತಿವೆ.

ಸೇವಾಭಾರತಿಯು ಅಸ್ಸಾಂನ  ಜೋರಹಟ್'ನಲ್ಲಿ ಪಾಂಚಜನ್ಯ ಗುಡಿ ಕೈಗಾರಿಕೆಯ ಮೂಲಕ ಪ್ರತಿಯೊಂದು ಗ್ರಾಮಗಳಿಗೂ ಹೋಗಿ ಬಿದಿರು ಕಲಾ ತರಬೇತಿಗಳನ್ನು ನೀಡುತ್ತಿದೆ. ಅವಿನಾಶ್ ಜೀ ಅವರ ಜೊತೆಯಲ್ಲಿ ನಗೇನ್ ಕಲಿತಾ ಮತ್ತು ರೊಮೇನ್ ಹಜಾರಿಕಾ ಅವರು ಶಿಕ್ಷಕರಾಗಿ ಸಹಯೋಗ ನೀಡಿ ಈ ಕಾರ್ಯದಲ್ಲಿ ತಮ್ಮ  ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ. ಸರಿಯಾದ ರಸ್ತೆ ಅಥವಾ ವಿದ್ಯುಚ್ಛಕ್ತಿ ಇಲ್ಲದ ಗುಡ್ಡಗಾಡು ಪ್ರದೇಶಗಳಿಗೂ ಹೋಗಿ ಪೂರ್ಣ ವಿಶ್ವಾಸದಿಂದ ಜನರಿಗೆ ಬಿದಿರು  ಕಲಾ ಕೌಶಲ್ಯ ತರಬೇತಿಯನ್ನು ನೀಡುವುದು, ಶಿಬಿರಗಳನ್ನು ಮಾಡುವುದು ಒಂದು ಮಹತ್ತರ ಕಾರ್ಯವಾಗಿದೆ.


ಪ್ರತಿಯೊಬ್ಬರೂ ಜೀವನದಲ್ಲಿ ಅನ್ವೇಷಣಾ ಗುಣವನ್ನು ಹೊಂದಿರುವುದು ಅತ್ಯವಶ್ಯಕ. ಆಗ ಒಂದು ಬಾಗಿಲು ಮುಚ್ಚಿದರೆ ಆ ವ್ಯಕ್ತಿಯು ಮತ್ತೊಂದು ತೆರೆದ ಬಾಗಿಲನ್ನು ಹುಡುಕಿಕೊಳ್ಳುತ್ತಾನೆ. ನಗೇನ್ ಕಲಿತಾ ಹೇಳುತ್ತಾರೆ; ಮಾಜುಲೀ ಗ್ರಾಮದ ದಿವ್ಯಜ್ಯೋತಿನಾಥ್ ಆಗಲಿ ಅಥವಾ ಜೊರಾಹಟ್ ನ ಪ್ರಣಬ್ ಜ್ಯೋತಿ ಚಾಂಗಮಾಯಿ ಆಗಲಿ, ಬಡತನದೊಂದಿಗೆ ಹೋರಾಡುತ್ತ ಪದವಿ ಪೂರೈಸಿದ ನಂತರವೂ ಅಲ್ಲಿ ಇಲ್ಲಿ ನೌಕರಿಯ ಹುಡುಕಾಟದಲ್ಲಿದ್ದರು. ಆದರೆ ಎಲ್ಲೂ ನೌಕರಿ ಸಿಗಲಿಲ್ಲ. ವೃದ್ಧ ತಾಯಿತಂದೆಗಳ ಮತ್ತು ಪರಿವಾರದ ಸಣ್ಣ ಸಣ್ಣ ಅವಶ್ಯಕತೆಗಳನ್ನೂ ಪೂರೈಸಲಾಗದ ಅಸಹಾಯಕತೆಯ ಭಾವ ಅವರನ್ನು ಒಳಗಿಂದೊಳಗೇ ಚುಚ್ಚುತ್ತಿತ್ತು. ಸೇವಾಭಾರತಿಯ ತರಬೇತಿ ಶಿಬಿರವು ಅವರಿಗೊಂದು ವರದಾನವಾಯಿತು. ಅವರೊಳಗಿನ ಸೃಜನಶೀಲ ಶಕ್ತಿಯು ಅವರಿಗೆ ಒಂದು ಹೊಸ ದಾರಿಯನ್ನು ತೋರಿತು. ಅವರ ಕಲ್ಪನೆ ಗರಿಗೆದರಿತು. 100 ರೂ. ಸಂಪಾದಿಸಲೂ ಅವಕಾಶವಿಲ್ಲದಿದ್ದ ಅವರು ಈಗ ತಿಂಗಳಿಗೆ 10 ರಿಂದ 15 ಸಾವಿರದವರೆಗೆ ಸಂಪಾದಿಸುತ್ತಿದ್ದಾರೆ.

ಭಾರತದ ಅರ್ಥವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು ಎಂದು ಹೇಳಲಾಗುತ್ತದೆ. ಆದರೆ ಇಂದಿಗೂ ಸಾಮಾನ್ಯ ಭಾರತೀಯ ಗೃಹಿಣಿಯು ನೇರವಾಗಿ ಯಾವುದೇ ಆದಾಯವನ್ನು ಹೊಂದಿರುವುದಿಲ್ಲ. ಅವಳು ಕೆಲವು ಸಾವಿರ ರೂಪಾಯಿಗೂ ಪತಿಯ ವರಮಾನದ ಮೇಲೆಯೇ ಅವಲಂಬಿತಳಾಗಿರುತ್ತಾಳೆ. ಅಸ್ಸಾಂನ ಪ್ರತಿಯೊಂದು ಮನೆಯಲ್ಲಿಯೂ ಮಹಿಳೆಯರು ಬಿದಿರಿನ ಸಾಮಾನುಗಳನ್ನು ತಯಾರಿಸುತ್ತಾರೆ. ಆದರೆ ಅವರ ವಸ್ತುಗಳಿಗೆ ಮಾರುಕಟ್ಟೆ ಎಲ್ಲಿದೆ ? ಸ್ಥಳೀಯ ಮಾರುಕಟ್ಟೆಗೆ ತರುವುದಾದರೂ ಹೇಗೆ? ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯಲು ಈ ಮಹಿಳೆಯರು ಹೋಗಲಿಲ್ಲ. ಇದರ ಪರಿಣಾಮವಾಗಿ ಅವರ ಕೌಶಲ್ಯವು ಅದೇ ನಾಲ್ಕು ಗೋಡೆಗಳೊಳಗೆ ಸೀಮಿತವಾಗಿಬಿಟ್ಟಿತು. ಇತ್ತೀಚೆಗೆ ಕೆಲವು ವರ್ಷಗಳಿಂದ ಸತತವಾಗಿ, ಮಾಜುಲಿ  ಗೋಲಾಘಾಟ್ ಜಿಲ್ಲೆಯ ಗ್ರಾಮಗಳ ಅನೇಕ ಸ್ಥಳಗಳಿಗೆ ಸೇವಾಭಾರತಿಯ ಕಡೆಯಿಂದ ಹೋಗಿ ಬಿದಿರಿನ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಅಲ್ಲಿ ಪುರುಷರೊಂದಿಗೆ ನೂರಾರು ಮಹಿಳೆಯರೂ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಸೇವಾಭಾರತಿಯ ಈ ಪ್ರಕಲ್ಪದ ಮೂಲಕ ಅವರಿಗೆ ತಮ್ಮೆಲ್ಲ ಪ್ರಶ್ನೆಗಳಿಗೂ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಇಂದು ಅವರಲ್ಲೇ ಒಬ್ಬರಾದ ದೀಪಶಿಖಾ ಬರಸುತಿಯಾ ತಮ್ಮ ನುರಿತ ಕರಕುಶಲತೆಯಿಂದಾಗಿ  ತಿಂಗಳಿಗೆ 10,000 ರೂಪಾಯಿ ಸಂಪಾದಿಸುತ್ತಿದ್ದಾರೆ. ಅಷ್ಟೇ ಅಲ್ಲ, ಅವರ ಕರಕುಶಲ ವಸ್ತುಗಳು ಜನರಿಗೆ ಬಹಳ ಇಷ್ಟವೂ ಆಗುತ್ತಿವೆ. ಈ ತರಬೇತಿ ಶಿಬಿರವು ಕೇವಲ ಅವರನ್ನು ಆತ್ಮನಿರ್ಭರರನ್ನಾಗಿ ಮಾಡಿರುವುದಷ್ಟೇ ಅಲ್ಲದೆ ಅವರ ಸ್ವಂತ ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳಲು ಸಹಾಯ ಮಾಡಿದೆ.

ಒಂದು ಆದರ್ಶಪ್ರಾಯವಾದ ಕಾರ್ಯಯೋಜನೆಯು ಸಾವಿರಾರು ಜನರಿಗೆ ದಾರಿಯನ್ನು ತೋರಿಸುತ್ತದೆ. 2019ರಿಂದ ಮೇಘಾಲಯದಲ್ಲಿಯೂ ಸೇವಾಭಾರತಿಯ ಬೆತ್ತ ಮತ್ತು ಬ್ಯಾಂಬೂ ಕ್ರಾಫ್ಟ್ ಸಂಸ್ಥೆಯು ಇದೇ ಹಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬಿದಿರಿನ ಕಲಾತ್ಮಕ ವಸ್ತುಗಳ ತರಬೇತಿಯನ್ನು ನೀಡಲು ನೋನಿಪಾಡ ಗ್ರಾಮದಲ್ಲಿ ಒಂದು ಕೇಂದ್ರವನ್ನು ನಡೆಸಲಾಗುತ್ತಿದೆ. ಅಲ್ಲಿ 250ಕ್ಕೂ ಹೆಚ್ಚಿನವರು ತರಬೇತಿ ಪಡೆದಿರುತ್ತಾರೆ. 15 ಗ್ರಾಮಗಳ ಸುಮಾರು 200 ಕ್ಕೂ ಹೆಚ್ಚಿನ ಕುಟುಂಬಗಳು ಇದರ ಪ್ರಯೋಜನವನ್ನು ಪಡೆಯುತ್ತಿವೆ.

ಸೇವಾಭಾರತಿಯ ಗಾರೋ ಹಿಲ್ಸ್ ನ ವಿಭಾಗ ಸಂಘಟನಾ ಮಂತ್ರಿಗಳಾಗಿರುವ ಜನಾರ್ದನ ಕೋಚ್  ಹೇಳುತ್ತಾರೆ:  ಬಿದಿರುಕಲೆಯ ಸಂಸ್ಕೃತಿ ಮತ್ತು ಅದರ ಪರಂಪರೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸುವ, ಬಿದಿರಿನಿಂದ ಮಾಡಿರುವ ಕಲಾತ್ಮಕ ವಸ್ತುಗಳಿಗೆ ಹಾಗೂ ಈ ಚಿಕ್ಕ ಚಿಕ್ಕ ಕೌಶಲ್ಯಗಳಿಗೆ ಗೌರವ ಮತ್ತು ಅದರದೇ ಆದ ಒಂದು ಪ್ರತ್ಯೇಕ ಅಸ್ತಿತ್ವವನ್ನು ನೀಡುವ ದಿಕ್ಕಿನಲ್ಲಿ ನಾವು ಚಿಕ್ಕ ಚಿಕ್ಕ ಗ್ರಾಮಗಳಲ್ಲಿ ಗ್ರಾಮವಾಸಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದೇವೆ. ಇದನ್ನು ಮುಂದೆ ವಿಶ್ವ ಮಟ್ಟದಲ್ಲಿ ಕೊಂಡೊಯ್ಯುವಲ್ಲಿ, ಸೇವಾಭಾರತಿಯ ಮೂಲಕ ಕಾರ್ಯಯೋಜನೆಯು ಜಾರಿಯಲ್ಲಿದೆ.

ಸಂಪರ್ಕ : ಅವಿನಾಶ್ ಹಜಾರಿಕಾ

ಮೊ.ಸಂ: +91 70021 13491, 94358 97848

331 Views
अगली कहानी