सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಒಂದು ಮಾದರಿ ಗ್ರಾಮ

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

 ಒಮ್ಮೆ ಈ ಗ್ರಾಮವನ್ನು ಪ್ರವೇಶಿಸಿ ನೋಡಿ... ಕನಸುಗಳು ಹೇಗೆ ಸುಂದರ ವಾಸ್ತವಕ್ಕೆ ಪರಿವರ್ತನೆಗೊಂಡಿವೆ.. ವಿನಾಶಗೊಂಡ ಬದುಕಿನ ಸ್ಥಿತಿಯಿಂದ ಜನರು ಹೇಗೆ ಅಭಿವೃದ್ಧಿಯ ಪಥದೆಡೆಗೆ ಬಂದಿದ್ದಾರೆ.... ಸಂಕಲ್ಪದೊಂದಿಗೆ ಶ್ರಮವೂ ಮಿಳಿತವಾದರೆ ಒಂದು ಅದ್ಭುತವು ಮೈತಳೆಯುತ್ತದಲ್ಲ.... ಈ ಎಲ್ಲವನ್ನೂ ಕಾಣಬಹುದು!!

ಈ ಗ್ರಾಮವು ಅದೆಷ್ಟೋ ವರ್ಷಗಳಿಂದ ಹನಿನೀರಾವರಿಯ ತಂತ್ರಜ್ಞಾನವನ್ನು ಅಳವಡಿಸಿದೆ, ಮತ್ತು ಮುಖ್ಯವಾದ ಅಂಶವೆಂದರೆ, ಇಲ್ಲೆಲ್ಲೂ ತೆರೆದ ಚರಂಡಿಗಳಿಲ್ಲ ಅಥವಾ ಮಣ್ಣಿನ ರೊಚ್ಚೆಗಳಿಲ್ಲ!! ಎಲ್ಲ ಮನೆಗಳಲ್ಲಿ ಶೌಚಾಲಯ ಮತ್ತು ಇಂಗುಗುಂಡಿಗಳಿವೆ! ಇಡೀ ಗ್ರಾಮವೇ ದಾಳಿಂಬೆ, ಮಾವು, ಹಲಸು, ಸೀಬೆ, ನೆಲ್ಲಿ, ಕಪ್ಪು ಪ್ಲಮ್ ಮರಗಳು, ಹಾಗೂ ಭಾರತೀಯ ಔಷಧೀಯ ಸಸ್ಯವಾದ ತುಳಸಿ ಮರಗಳಿಂದ ಶೋಭೆಗೊಂಡಿದೆ! ಇಲ್ಲಿನ ಸಾಕ್ಷರತೆ 100% ಮತ್ತು ರಾಜ್ಯದಲ್ಲೇ ಅತ್ಯಂತ ಅಭಿವೃದ್ಧಿ ಹೊಂದಿದ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ!!

ನಾವೀಗ ಉಲ್ಲೇಖಿಸುತ್ತಿರುವುದು ಉತ್ತರ ಪ್ರದೇಶದ ಮೊಹಮ್ಮದಿ ತಹಸೀಲ್ದಾರ ನ (ಲಾಖಿಂಪುರ ಖೀರಿ ಜಿಲ್ಲೆ) ರವೀಂದ್ರನಗರ ಎಂಬ ಮಾದರಿ ಗ್ರಾಮದ ಬಗ್ಗೆ! ಈ ಗ್ರಾಮವು ಗುರುದೇವ ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮದಿನಾಚರಣೆಯ ವಾರ್ಷಿಕೋತ್ಸವದಂದು ರೂಪುಗೊಂಡಿತು ಮತ್ತು ಅದೇ ಕಾರಣಕ್ಕಾಗಿ ಗುರುದೇವರ ಹೆಸರನ್ನೇ ಪಡೆದಿದೆ!




ಇದೆಲ್ಲವೂ ದೇಶ ವಿಭಜನೆಯ ದುಷ್ಪರಿಣಾಮಗಳನ್ನು ಮತ್ತು ಹಲವಾರು ಸಂಕಷ್ಟಗಳನ್ನು ವರ್ಷಾನುಗಟ್ಟಲೆ ಎದುರಿಸಿ, ಇಲ್ಲಿಗೆ ಬಂದು ತಮ್ಮ ಶ್ರಮಜೀವನದಿಂದ ಅಭಿವೃದ್ಧಿಯನ್ನು ಸಾಕಾರ ಮಾಡಿಕೊಂಡ ಬಂಗಾಳದ ಜನರ ಕಥೆಯಿದು! ಇವರು ಮೂಲಭೂತ ಸೌಕರ್ಯಗಳಾದ ಆಹಾರ ಮತ್ತು ಆಶ್ರಯ ಇವುಗಳಿಂದ ವಂಚಿತರಾದವರು. ನಿರಾಶ್ರಿತರ ಶಿಬಿರಗಳಲ್ಲಿ ಕಾಲರಾ , ವಾಂತಿಭೇದಿ ಹಾಗೂ ಕಪ್ಪುಜ್ವರಗಳು ಸರ್ವೇಸಾಮಾನ್ಯವಾಗಿದ್ದವು. ಅಭಿವೃದ್ಧಿಯ ಹೆಸರಿನಲ್ಲಿ ಈ ಕುಟುಂಬಗಳು ಗೋಮತಿ ನದಿಯ ಪಕ್ಕದ ಒಂದು ಅರಣ್ಯ ಪ್ರದೇಶಕ್ಕೆ ಸಾಗಿಸಲ್ಪಟ್ಟಿದ್ದವು. ಅವರ ಈ ಶೋಚನೀಯ ಸ್ಥಿತಿ ಹಾಗೆಯೇ 8 ವರ್ಷಗಳವರೆಗೆ ಮುಂದುವರೆಯಿತು .




ಸ್ಥಳೀಯ ಸ್ವಯಂಸೇವಕರು ಮತ್ತು ಗ್ರಾಮಾಭಿವೃದ್ಧಿಯ ಜಿಲ್ಲಾ ಮುಖ್ಯಸ್ಥರಾದ ಶ್ರೀ. ತಪನ್ ಕುಮಾರ್ ಹೇಳುವಂತೆ, ಈ ಕುಟುಂಬಗಳು ಕಾಡಿನ ಅಕ್ಕಿಯನ್ನು ಬೇಯಿಸಿ, ಮೀನಿನೊಂದಿಗೆ ಉಣ್ಣುತ್ತಿದ್ದವು! 50 ವರ್ಷಗಳ ಹಿಂದೆ ಸಂಘವು ಈ ಪ್ರದೇಶದಲ್ಲಿ ಒಂದು ಶಾಖೆಯನ್ನು ಆರಂಭಿಸಿತು. ಪರಿಣಾಮ... ಈ ಕುಟುಂಬಗಳು ತಮ್ಮ ಸಂಕಷ್ಟದ ಜೀವನವನ್ನು ಬದಲಿಸಿಕೊಂಡು, ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆದು, ಗ್ರಾಮವನ್ನೂ ತಮ್ಮೊಂದಿಗೆ ಬದಲಿಸಿದರು . ಈ ಗ್ರಾಮಸ್ಥರು ಮಾಡಿದ ಮೊದಲ ಕೆಲಸವೆಂದರೆ, ಸ್ವಯಂಸೇವಕರ ನೆರವಿನಿಂದ ಉಳುವ ಭೂಮಿಯನ್ನು ಹಸನು ಮಾಡಿಕೊಂಡಿದ್ದು! ಇದು ಅತ್ಯಂತ ಕಷ್ಟಕರವಾದ ಕೆಲಸವಾಗಿತ್ತು. ಸ್ವಯಂ ಸೇವಕರು ಹಾಗೂ ಗ್ರಾಮಸ್ಥರು ಇದಕ್ಕಾಗಿ ಬಹಳ ಶ್ರಮ ಪಡಬೇಕಾಯಿತು.

ರವೀಂದ್ರ ನಗರವು (ಮಾಯಾಪುರ ಎಂಬುದು ಹಿಂದಿನ ಹೆಸರು) ಮೊದಲಿಗೆ ಯಕ್ಷಿಣಿ ವಿದ್ಯೆ ಬಲ್ಲವರ ಹಾಗೂ ಹಾವಾಡಿಗರ ಅವಾಸಸ್ಥಾನವಾಗಿತ್ತು ಎಂಬ ಪ್ರತೀತಿ ಇತ್ತು. ಹಾಗಾಗಿ ಜನರು ಈ ಪ್ರದೇಶಕ್ಕೆ ಹೋಗಲು ಹೆದರುತ್ತಿದ್ದರು. ಆದರೆ, ಎಲ್ಲ ವಿಷಮ ಪರಿಸ್ಥಿತಿಗಳನ್ನೂ ಮೀರಿ, ಸ್ವಯಂ ಸೇವಕರು ಈ ಕುಟುಂಬಗಳಿಗೆ ಒಳಿತನ್ನು ಮಾಡಬೇಕೆಂಬ ನಿರ್ಧಾರ ಹೊಂದಿದ್ದರು.




ಈ ಪ್ರಕ್ರಿಯೆಯಲ್ಲಿ 1969ರಲ್ಲಿ "ಭೈರವಚಂದ್ರ ರಾಯ್" ಅವರಿಂದ ಮೊದಲ ಶಾಖೆಯ ಪ್ರಾರಂಭವಾಯಿತು. ಅಂದಿನಿಂದ ಕಳೆದ 50 ವರ್ಷಗಳಿಂದ ಅಲ್ಲಿ ಶಾಖೆಯ ಕಾರ್ಯಗಳು ಸತತವಾಗಿ ನಡೆಯುತ್ತಿವೆ. ಸ್ವಯಂ ಸೇವಕರ ನೆರವಿನಿಂದ ಶಾಲೆಗೆಂದು ದಾನವಾಗಿ ಕೊಟ್ಟ ಸ್ಥಳದಲ್ಲಿ ಮೊದಲ "ಶಾಲೆ" ಯು ಪ್ರಾರಂಭವಾಯಿತು. ನಂತರದ ದಿನಗಳಲ್ಲಿ ಈ ಶಾಲೆಯು ಸರಕಾರದಿಂದ ಮಾನ್ಯತೆಯನ್ನೂ ಪಡೆಯಿತು. ಇಂದಿಗೂ ಸಹ ಹುಮ್ಮಸ್ಸಿನ ಕಾರ್ಯಕರ್ತರಾದ ಸಂಜಯ್ ವಿಶ್ವಾಸ್, ಮಲ್ಲಿಕಾ ಮಂಡಲ್, ಮಿಲನ್ ಮತ್ತು ಶಂಭು ಅವರು ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿನ ಸಾಕ್ಷರತೆಯನ್ನು 100%ಕ್ಕೆ ಏರಿಸಲು ಸಹಕಾರಿಯಾಗಿದ್ದಾರೆ.




ಇಲ್ಲಿನ ಜನರು ಸಾಂಪ್ರದಾಯಿಕ ಆಚರಣೆಗಳಲ್ಲಿ ನಂಬಿಕೆಯಿಟ್ಟವರು. ಇಂದಿಗೂ ತಮ್ಮ ಮನೆಗಳಿಗೆ ಸಗಣಿಯಿಂದಲೇ ಗಾರೆ ಮಾಡುತ್ತಾರೆ ಮತ್ತು ಪ್ರತೀ ಬೆಳಗನ್ನು ಶಂಖವಾದನದ ಮೂಲಕ ಪ್ರಾರಂಭಿಸುತ್ತಾರೆ. ಮಹಿಳೆಯರು ಉದ್ಯೋಗಕ್ಕಾಗಿ ಬೀಡಿಯನ್ನು ಕಟ್ಟುತ್ತಾರೆ, ಆದರೆ ಆಶ್ಚರ್ಯದ ಸಂಗತಿ ಎಂದರೆ, ಈ ಗ್ರಾಮದಲ್ಲಿ ಯಾರೂ ಬೀಡಿ ಸೇದುವುದಿಲ್ಲ . ಗ್ರಾಮದ ಮಹಿಳೆಯರಿಗೆ ಹೊಲಿಗೆ, ಕಸೂತಿ ಇತ್ಯಾದಿಗಳ ಮಾರ್ಗದರ್ಶನ ನೀಡಿ, ಉದ್ಯೋಗ ಸೃಷ್ಟಿ ಮಾಡುವ ನಾಲ್ಕು ಸ್ವಸಹಾಯ ಗುಂಪುಗಳಿವೆ. ರವೀಂದ್ರ ನಗರವು ಸ್ವಚ್ಛತೆಗೆ ಒಂದು ಮಾದರಿಯಾಗಿದೆ ಮತ್ತು ಉತ್ತರ ಪ್ರದೇಶದ ಯಾವುದೇ ಭಾಗದಲ್ಲೂ ಈ ರೀತಿಯ ಸ್ವಚ್ಛ ಮತ್ತು ಸುಂದರ ಶಾಲೆಯನ್ನು ಕಾಣಲು ಅಸಾಧ್ಯ! ಸ್ವಯಂ ಸೇವಕರ ನೆರವು ಹಾಗೂ ಪರಿಶ್ರಮದ ಫಲವಾಗಿ ಶಾಲೆ, ಪಂಚಾಯತ್, ಮನೆಗಳು, ಮಂದಿರಗಳು, ರಸ್ತೆಗಳು ಹಾಗೂ ಆಟದ ಬಯಲುಗಳು, ಎಲ್ಲವೂ ಸ್ವಚ್ಛವಾಗಿವೆ! ಆಟದ ಮೈದಾನವು ಒಂದು ಕ್ರೀಡಾಂಗಣವಾಗಿ ಪರಿವರ್ತನೆಗೊಂಡಿದೆ. ಸ್ಥಳೀಯರ ನೆರವಿನಿಂದ ಸೂಕ್ತ ರಸ್ತೆಗಳೂ ನಿರ್ಮಿಸಲ್ಪಟ್ಟಿವೆ. ಸಂಘದಲ್ಲಿರುವ ಗ್ರಾಮಾಭಿವೃದ್ಧಿಯ ಈಗಿನ ಮುಖ್ಯಸ್ಥರಾದ ಶ್ರೀ.




ಪ್ರೇಮಶಂಕರ ಅವಸ್ಥಿ ಅವರು 2009ರಲ್ಲಿ ಈ ಗ್ರಾಮದ ಅಭಿವೃದ್ಧಿಯ ಕಾರ್ಯವನ್ನು ಕೈಗೆತ್ತಿಕೊಂಡರು ಮತ್ತು ಅವರು ಈ ಗ್ರಾಮದ ಹರಿಕಾರರೆಂದೇ ಪ್ರಸಿದ್ಧರಾಗಿದ್ದಾರೆ. ಗ್ರಾಮದಲ್ಲಿ ಯಾರೂ ನಿರುದ್ಯೋಗಿಗಳಿಲ್ಲ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ರವೀಂದ್ರನಗರವು ಚಿಮಣಿಗಳ ವಾಣಿಜ್ಯೋದ್ಯಮಕ್ಕೆ ಪ್ರಸಿದ್ಧವಾಗಿದೆ. ಇದರೊಂದಿಗೆ ಮೂರ್ತಿ ತಯಾರಿಕೆ, ಕಟ್ಟಡದ ನಿರ್ಮಾಣ, ವಿದ್ಯುತ್ ಕಾಮಗಾರಿಗಳು, ಮೋಟಾರ್ ಬೈಂಡಿಂಗ್, ಮೊದಲಾದ ಇತರ ಉದ್ಯಮಗಳೂ ಇವೆ. ಈ ಗ್ರಾಮದ ಯುವಕರು ತಮ್ಮ ಜೀವನವನ್ನು ಸುಂದರವಾಗಿಸಿಕೊಂಡಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ವೈದ್ಯಕೀಯ ಸಲಹೆಗಾರರಾಗಿರುವ ಡಾ. ಚಿತ್ರರಂಜನ್ ವಿಶ್ವಾಸ್!


ರವೀಂದ್ರ ನಗರವು ಒಂದು ಮಾದರಿ ಗ್ರಾಮವಾಗಿದೆ. ಸಂಕಷ್ಟಗಳನ್ನು ಎದುರಿಸಿ, ಸತತ ಪರಿಶ್ರಮದಿಂದ ಇತರರಿಗೂ ಮಾದರಿಯಾಗುವಂತೆ ಹೇಗೆ ಒಂದು ಪ್ರದೇಶವನ್ನು ಅಭಿವೃದ್ಧಿಯ ಮೇರುಸ್ಥಿತಿಗೆ ಕೊಂಡೊಯ್ಯಬಹುದು ಎನ್ನುವುದಕ್ಕೆ ರವೀಂದ್ರ ನಗರ ಜ್ವಲಂತ ನಿದರ್ಶನವಾಗಿದೆ .


ಸಂಪರ್ಕ ವ್ಯಕ್ತಿ - ತಪನ್ ಕುಮಾರ್

ಸಂಪರ್ಕ ಸಂಖ್ಯೆ - +916394671084
1328 Views
अगली कहानी