सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಶ್ರೇಷ್ಠ ಕರ್ಮಯೋಗಿ-ಶ್ರೀ ಅಜಿತ್ ಕುಮಾರ್ ಜೀ

ಶ್ರೀಮತಿ ಮೇಘ ಪ್ರಮೋದ್ | ಕರ್ನಾಟಕ

parivartan-img

23ನೇ ವಯಸ್ಸಿನಲ್ಲಿ ಎಲೆಕ್ಟ್ರಿಕಲ್  ಹಾಗೂ ಮೆಕ್ಯಾನಿಕಲ್  ಎಂಜಿನಿಯರಿಂಗ್ ನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದ ಒಬ್ಬ ತರುಣನಿಗೆ ತನ್ನ ಭವ್ಯವಾದ ವೃತ್ತಿಜೀವನವನ್ನುರೂಪಿಸಿಕೊಳ್ಳುವುದು ಕಷ್ಟದ ವಿಷಯವಾಗಿರಲಿಲ್ಲ, ಆದರೆ ಆ ತರುಣನ ಕನಸುಗಳು  ಇವೆಲ್ಲಕ್ಕಿಂತ ಭಿನ್ನವಾಗಿತ್ತು. ಬಹುಶಃ ಇತಿಹಾಸ ನಿರ್ಮಿಸುವವರು  ಸರಳವಾದ ಮಾರ್ಗವನ್ನು ಆರಿಸಿಕೊಳ್ಳುವುದಿಲ್ಲವೆಂದು ಅನ್ನಿಸುತ್ತದೆ, ಅಂತೆಯೇ ಕರ್ನಾಟಕದ ಕೋಲಾರ ಜಿಲ್ಲೆಯ ಗುಡಿಬಂಡೆಯ ಉನ್ನತ ಸರ್ಕಾರಿ ಅಧಿಕಾರಿಯಾದ ಶ್ರೀ ಬ್ರಹ್ಮಸೂರಯ್ಯ ಹಾಗೂ ಅವರ

ಶ್ರೀಮತಿ ಪುಟ್ಟತಾಯಮ್ಮನವರ ಮಗನಾದ ಶ್ರೀ ಅಜಿತ್ ಕುಮಾರರು ಆಯ್ಕೆ ಮಾಡಿಕೊಂಡದ್ದು ಸಮಾಜಾಭಿಮುಖಿಯಾದ ಒಂದು ವಿಶಿಷ್ಟ ಮಾರ್ಗವನ್ನು.

 ಉದ್ಯೋಗಕ್ಕಾಗಿ ಪ್ರತಿಷ್ಟಿತ ಕಂಪೆನಿಗಳ ಹಿಂದೆ ಹೋಗದೆ 1957ರಲ್ಲಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ಹೊರಟರು. ಶ್ರೀ ಅಜಿತ್ ಕುಮಾರ್ ರವರು ಸೇವಾ ಕ್ಷೇತ್ರದಲ್ಲಿ ಒಂದು ವಿಭಿನ್ನ ಮಾದರಿಯ ಸಂಸ್ಥೆ ಹಿಂದೂ ಸೇವಾ ಪತಿಷ್ಠಾನ


ಸ್ಥಾಪನೆಗೆ ಕಾರಣರಾದರು.ಮುಂದೆ ಈ ಸಂಸ್ಥೆಯ ಮೂಲಕ ವಿವಿಧ ರೀತಿಯ ಪ್ರಕಲ್ಪಗಳು ಕೂಡ ಅರಳಿದವು. ತರಬೇತಿ ನೀಡುವ ಮೂಲಕ ಜನರನ್ನು ಸೇವೆಗೆ ಸಿದ್ಧಗೊಳಿಸಬಹುದು ಹಾಗೂ ಇದರಲ್ಲಿ ಮಹಿಳೆಯರು ಕೂಡ ಪೂರ್ಣಾವಧಿಯಾಗಿ ಕೆಲಸ ಮಾಡಬಹುದು ಎಂಬ ಈ ಎರಡೂ ವಿಷಯವೂ ಸಂಘಕ್ಕೆ  ಹೊಸತಾಗಿತ್ತು. ಈ ಪರಿಕಲ್ಪನೆಯನ್ನು ಸಾಕಾರಗೊಳಿಸಲು 1980ರಲ್ಲಿ ಹಿಂದೂ ಸೇವಾ

ಪ್ರತಿಷ್ಠಾನದ ಸ್ಥಾಪನೆಯಾಯಿತು. ಇಲ್ಲಿ ಸೇವಾವ್ರತಿಗಳಿಗೆ 40 ದಿನಗಳ  ಪ್ರಶಿಕ್ಷಣವನ್ನು ನೀಡಲಾಯಿತು ಹಾಗು ಇದರ ಮೊದಲ ಸೇವಾವ್ರತಿಗಳ ತಂಡದಲ್ಲಿ 23 ಯುವಕ, ಯುವತಿಯರು ಭಾಗವಹಿಸಿದ್ದರು. ಪ್ರತಿಷ್ಠಾನದ ವಿವಿಧ ಪ್ರಕಲ್ಪಗಳಾದ  ನೆಲೆ, ಅರುಣ ಚೇತನ, ಪ್ರಸನ್ನಾ ಕೌನ್ಸಲಿಂಗ್ ಸೆಂಟರ್, ಸೇವಾಮಿತ್ರ, ಸುಪ್ರಜಾಗಳಿಗೆ ಸೇವಾವ್ರತಿಗಳು ಈ ಪ್ರಶಿಕ್ಷಣದಿಂದಲೇ ದೊರೆತರು. ಸ್ವರ್ಗೀಯ ಶ್ರೀ ಅಜಿತ್ ಕುಮಾರರ ಈ

ಪರಿಕಲ್ಪನೆಯು ವಿಶಾಲ ವಟವೃಕ್ಷವಾಗಿ ಬೆಳೆದು ನಿಂತಿತು. ಸ್ಥಾಪನೆಗೊಂಡ ನಂತರ, 42 ವರ್ಷಗಳಲ್ಲಿ, 4000 ಕ್ಕಿಂತಲೂ ಹೆಚ್ಚಿನ ಜನ  ಸೇವಾವ್ರತಿಗಳಾಗಿ ತಮ್ಮ ಜೀವನವನ್ನು ಸೇವಾಕಾರ್ಯಕ್ಕಾಗಿ ಸಮರ್ಪಿಸಿದ್ದಾರೆ, ಅದರಲ್ಲಿ 3,500 ಜನ ಮಹಿಳೆಯರೇ ಇರುವುದು

ವಿಶೇಷ.


ಶ್ರೀ ಅಜಿತ್ ಕುಮಾರರು  ಬಿಇ ಮಾಡುತ್ತಿರುವಾಗ ಬೆಂಗಳೂರಿನ ಕಬ್ಬನ್ ಪೇಟೆಯ ಕಲ್ಯಾಣ ಶಾಖೆಯಲ್ಲಿ ಸಂಘ ಜೀವನವನ್ನು ಆರಂಭಿಸಿದರು.  ಸಂಘದ ಪ್ರಥಮ ಶಿಕ್ಷಾ ವರ್ಗದ  ಶಿಕ್ಷಣ ಅವರ ಜೀವನದ ದಿಕ್ಕನ್ನು ಬದಲಿಸಿತು. ಕಾಲೇಜು ಜೀವನದಲ್ಲೆ ವಿದ್ಯಾರ್ಥಿ ಪರಿಷತ್ತಿನ ಕಾರ್ಯ ನಿರ್ವಹಿಸುತ್ತಲೇ ಅಭಾವಗ್ರಸ್ತ ಜನರ ಜೀವನವನ್ನು ಸುಧಾರಿಸುವ ಬಗ್ಗೆ ಅವರು ಚಿಂತಿಸುತ್ತಿದ್ದರು.

ಶ್ರೀ ಅಜಿತ್ ಕುಮಾರರು 1957ರಲ್ಲಿ ಸಂಘದ ಪ್ರಚಾರಕರಾಗಿ ಹೊರಟ ನಂತರ 1975ರ ತನಕ ಸಂಘದ ವಿವಿಧ ಜವಾಬ್ಧಾರಿಗಳನ್ನು ನಿರ್ವಹಿಸಿದರು. ತುರ್ತು ಪರಿಸ್ಥಿತಿಯ ಸಮಯದಲ್ಲಿ MISA ಬಂಧಿಯ ರೂಪದಲ್ಲಿ 2 ವರ್ಷಗಳಕಾಲ ಜೈಲಿನಲ್ಲಿದ್ದಾಗಲೂ ಬಂಧಿತರಿಗೆ ಯೋಗ ತರಬೇತಿಯನ್ನು ನೀಡುತ್ತಿದ್ದರು. ಸಂಘದ ಶಿಕ್ಷಾ ವರ್ಗಗಳ ಪಠ್ಯಕ್ರಮಗಳಲ್ಲಿ ಯೋಗಾಭ್ಯಾಸವನ್ನು ಸೇರಿಸಿದ ಶ್ರೇಯ ಶ್ರೀ ಅಜಿತ್ ಜೀಯವರಿಗೆ ಸಲ್ಲುತ್ತದೆ. ಇದಕ್ಕಾಗಿ ಅವರು ಮೊದಲಿಗೆ ಮೈಸೂರಿನ ಶ್ರೀ ಪಟ್ಟಾಭಿ ಜೋಯಿಸರ ಬಳಿ ನಂತರ ಪ್ರಸಿದ್ಧ ಯೋಗಾಚಾರ್ಯ ಶ್ರೀ ಬಿ ಕೆ ಎಸ್ ಅಯ್ಯಂಗಾರ್ ಅವರ ಬಳಿ ಯೋಗ ಕಲಿತು ಯೋಗಪಟುವಾದರು.


ಸೆವಾವ್ರತಿಗಳ ತರಬೇತಿ ಪಠ್ಯಕ್ರಮಗಳ ತಯಾರಿಯಲ್ಲಿ ಅಜಿತ್ ಕುಮಾರ್ ಜೀಗೆ ಸಹಕರಿಸಿದ ಶ್ರೀ ದತ್ತಾತ್ರೇಯ ಹೊಸಬಾಳೆ ಜೀ (ಪ್ರಸ್ತುತ ಸರಕಾರ್ಯವಾಹರು) ಹೇಳುತ್ತಾರೆ,”ಸೇವೆಯ ಅವಶ್ಯಕತೆ ಇರುವವರು ಲಕ್ಷಾಂತರ ಮಂದಿ ಇದ್ದಾರೆ, ಆದರೆ ಸೇವೆ ಮಾಡಬಲ್ಲವರು ಕೇವಲ

ಬೆರಳೆಣಿಕೆಯಷ್ಟು, ಮೂಲ ಸ್ವಭಾವದಲ್ಲೇ ಸೇವಾಭಾವವನ್ನು ಹೊಂದಿರುವ ಮಹಿಳೆಯೇ ಸೇವೆಯಿಂದ ಮೈಲುಗಟ್ಟಲೆ ದೂರ ನಿಂತಿದ್ದಾಳೆ ಎಂದು ಅಜಿತರು ಚಿಂತಿಸುತ್ತಿದ್ದರು ಎಂದು”. ಬಹುಶಃ ಅವರ ಈ ಯೋಚನೆಯೇ ಸೇವಾವ್ರತಿ’  ಪರಿಕಲ್ಪನೆಗೆ ಜೀವ ನೀಡಿರಬಹುದು. ಸೇವಾವ್ರತಿಗಳ ತರಬೇತಿ ಶಿಬಿರದಲ್ಲಿ ಭಾರತದ ಶ್ರೇಷ್ಠ ಪರಂಪರೆ, ಮಹಾಪುರುಷರ ಜೀವನ ಚರಿತ್ರೆ, ಸೇವೆಯ ಅವಶ್ಯಕತೆ, ಯೋಗ ಹಾಗು ಅನುಶಾಸನಗಳಂತಹ ವಿಭಿನ್ನ ವಿಷಯಗಳ ಬಗ್ಗೆ ತಿಳಿಸಿ, ಸೇವೆಗಾಗಿ ಉತ್ತಮ ವ್ಯಕ್ತಿಗಳನ್ನು ನಿರ್ಮಾಣ ಮಾಡಿ ಅವರನ್ನು ಅಭಾವಗ್ರಸ್ಥ ಸಮಾಜದ ಉನ್ನತಿಗಾಗಿ ಶ್ರಮಿಸುವಂತೆ ಮಾಡಲಾಯಿತು. ತರಬೇತಿಯ ನಂತರ ಸೇವಾವ್ರತಿಗಳು ತಮ್ಮ ಅಭಿರುಚಿಗೆ ಅನುಗುಣವಾಗಿ 3 ವರ್ಷಗಳ ಕಾಲ ತಮ್ಮ  ತಮ್ಮ ಕಾರ್ಯಕ್ಷೇತ್ರಗಳಲ್ಲಿ ಸೇವಾಕಾರ್ಯಕ್ಕಾಗಿ ಸಮಯ ನೀಡುತ್ತಿದ್ದರು.ಇದಕ್ಕಾಗಿ ಸೇವಾವ್ರತಿಗಳ ಊಟ, ವಸತಿಯ ವ್ಯವಸ್ಥೆಯ ಜೊತೆ ಜೊತೆಗೆ ಸಣ್ಣ ಮೊತ್ತದ ಗೌರವ ಧನವನ್ನು ಪ್ರತಿಷ್ಠಾನದಿಂದ ನೀಡಲಾಯಿತು. ತಮ್ಮ ಜೀವನದ ಯೌವನಾವಸ್ಥೆಯ 3 ವರ್ಷವನ್ನು ಸೇವಾಕಾರ್ಯಕ್ಕಾಗಿ ಸಮರ್ಪಿಸಿಕೊಂಡ ನಂತರ ಹೆಚ್ಚಿನ ಸೇವಾವ್ರತಿಗಳು ತಮ್ಮ ಮುಂದಿನ ಜೀವನದಲ್ಲಿಯೂ ಸೇವಾವ್ರತವನ್ನು ಮುಂದುವರಿಸಿದರು.

1989ರಲ್ಲಿ ಇಲ್ಲಿಂದ ತರಬೇತಿ ಪಡೆದು ಪ್ರತಿಷ್ಠಾನದಲ್ಲಿ ಹಲವು ವರ್ಷಗಳ ಕಾಲ ಮಹಿಳಾ ವಿಭಾಗದ ಸಂಚಾಲಕಿಯರಾಗಿದ್ದ ವನಿತಾ ಹೆಗ್ಡೆ ಹೇಳುತ್ತಾರೆ, ಶ್ರೀ ಅಜಿತ್ ಜೀ ಪ್ರತಿಷ್ಠಾನದ ಸ್ಥಾಪನೆಯ ನಂತರ ಕೇವಲ 9 ವರ್ಷಗಳ ಕಾಲ ಬದುಕಿದ್ದರು ಆದರೆ ಆ 9 ವರ್ಷದಲ್ಲಿ ತಮ್ಮ ಎಲ್ಲಾ ಶಕ್ತಿಯನ್ನು ಈ ಸಂಸ್ಥೆಯನ್ನು ಯಶಸ್ವಿಯಾಗಿಸಲು ಶ್ರಮಿಸಿದರು. ತರಬೇತಿಯ ಸಮಯದಲ್ಲಿ ಪೂರ್ಣ ಸಮಯ ಅವರು ಅಲ್ಲೇ ಇರುತ್ತಿದ್ದರು ಹಾಗೂ ಭಾಗವಹಿಸಿದವರೊಂದಿಗೆ ಅವರ ಆತ್ಮೀಯ ಸಂಬಂಧ ಬೆಳೆದು ಬಿಡುತ್ತಿತ್ತು,ಯಾರು ಸೇವಾ ಬಸ್ತಿಗಳಲ್ಲಿ ಕೆಲಸ ಮಾಡಬಲ್ಲರು? ಯಾರ ಸಾಮರ್ಥ್ಯ ಯೋಗ ಕೇಂದ್ರಗಳಲ್ಲಿ ಹೆಚ್ಚು ಉಪಯುಕ್ತ ಎಂಬುದನ್ನು ಚನ್ನಾಗಿ ಗುರುತಿಸ ಬಲ್ಲವರಾಗಿದ್ದರು.


ಸೇವಾವ್ರತಿಗಳನ್ನು ಸರಿಯಾದ ಕಾರ್ಯಕ್ಕೆ ನಿಯೋಜಿಸುವುದಷ್ಟೇ ಅಲ್ಲ ಕಾರ್ಯಕ್ಷೇತ್ರದಲ್ಲಿ ಅವರು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವಲ್ಲೂ ಅವರ ಮಹತ್ವಪೂರ್ಣ ಪಾತ್ರ ಇರುತ್ತಿತ್ತು. ಅವರು ಕಾರ್ಯಕ್ಷೇತ್ರಗಳಿಗೆ ಭೇಟಿ ನೀಡಿ ಒಂದು ದಿನ ಸೇವಾವ್ರತಿಗಳೊಂದಿಗೆ ಇರುತ್ತಿದ್ದರು. ಅವರ ಸಹಜವಾದ ವಾತ್ಸಲ್ಯ ಹಾಗೂ ವಿಚಾರಗಳಿಂದ ಪ್ರಭಾವಿತರಾಗಿ ಅನೇಕ ಯುವಕ, ಯುವತಿಯರು ಆಜೀವಪರ್ಯಂತ ಸೇವೆಯ ಸಂಕಲ್ಪವನ್ನು ತೊಟ್ಟರು. ಸೇವೆ ಮಾಡಲು  ಉತ್ತಮ ವ್ಯಕ್ತಿಗಳ ನಿರ್ಮಾಣವಾಗಬೇಕು ಎಂಬ ವಿಷಯವನ್ನು ಹಿಂದೂ ಸೇವಾ ಪ್ರತಿಷ್ಠಾನದ ಪ್ರಥಮ ನಿರ್ದೇಶಕರಾದ ಶ್ರೀ ಅಜಿತ್ ಕುಮಾರ್ ಜೀ ತಮ್ಮ ಸಹವರ್ತಿಗಳಲ್ಲೂ ಬಿತ್ತಿದ್ದರು.

ಆದರೆ ಕಾಲದ ಕ್ರೂರ ದಾಳಿಯು ಅವರನ್ನು ಅಕಾಲಿಕವಾಗಿ ನಮ್ಮೆಲ್ಲರಿಂದ ದೂರ ಮಾಡಿತು.ಅವರು ತಮ್ಮ 56 ನೇ ವಯಸ್ಸಿನಲ್ಲಿ ಅಂದರೆ 3 ಡಿಸೆಂಬರ್ 1990 ರಂದು ಬೆಳಗಿನ ಜಾವ 4 ಗಂಟೆಗೆ ಬೆಂಗಳೂರಿನ ಸಂಘಕಾರ್ಯಾಲಯ ಕೇಶವಕೃಪಾದಿಂದ ತುಮಕೂರಿಗೆ ಹೋಗುವಾಗ ಕಾರು ಅಪಘಾತದಲ್ಲಿ ನಿಧನರಾದರು.

ಶ್ರೀ ಅಜಿತ್ ಜೀರವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ನಾನಾಜೀ ದೇಶಮುಖ್ ರವರು.. 16 ವರ್ಷದ ಯುವತಿಯೊಬ್ಬಳು ಸೇವೆ ಸಲ್ಲಿಸಲು  ಸ್ವತಃ ಫಾರ್ಮ್ ತುಂಬುವ ಮೂಲಕ ತರಬೇತಿ ಪಡೆಯುತ್ತಾಳೆ ಎಂಬ ವಿಷಯವನ್ನು ನಂಬುವುದು ಇಡಿ ಉತ್ತರ ಭಾರತಕ್ಕೆ ಕಷ್ಟವಾದ ವಿಷಯ

ಎಂದು ಹೇಳಿದ್ದರು.ಆದರೆ ಅಂತಹ ಅಸಾಧ್ಯವೆಂದು ತೋರುವ ಒಂದು ಯೋಜನೆಯನ್ನು ಯಶಸ್ವೀ ಯೋಜನೆಯಾಗಿ ಮಾಡಿ ತೋರಿಸಿದವರು ಸ್ವರ್ಗೀಯ ಶ್ರೀ ಅಜಿತ್ ಕುಮಾರ್ ಜೀ ಅವರು.

2059 Views
अगली कहानी