सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಬದುಕಿನ ಸಂಧ್ಯಾಕಾಲದಲ್ಲಿ ನೂರಾರು ಮಕ್ಕಳ ಬಾಲ್ಯವನ್ನು ಪೋಷಿಸಿದವರು

ಶ್ರೀಮತಿ ರೂಪಶ್ರೀ ನಾಗರಾಜ್ | ದಕ್ಷಿಣ

parivartan-img

ಮೀಠಾರಾಮನು ಕೊರತೆಗಳಿಂದ ತುಂಬಿದ್ದ ತನ್ನ ಗತಕಾಲಾದ ಕತ್ತಲಿನ ಬಾಲ್ಯವನ್ನು ನೆನೆಯುತ್ತ ಅವನ ಕಂಠ ತುಂಬಿ ಬಂದಿತ್ತು. ಮೆಹಸಾಣಾದಲ್ಲಿ ಎಂಟು ವರ್ಷದ ಅಣ್ಣ, ಆರು ವರ್ಷದ ತಮ್ಮ ಪಿಂಟು ಮತ್ತು ತಾಯಿಯೊಂದಿಗೆ ಬೀದಿಯ ಮೂಲೆಯ ಫುಟ್ಪಾತ್ ಅನ್ನೇ ಹಾಸಿಗೆಯಾಗಿ, ಆಕಾಶವನ್ನೇ ಹೊದಿಕೆಯನ್ನಾಗಿ ಹೊದ್ದು, ಇಡೀ ರಾತ್ರಿ ಮುದುಡಿ ವಿವರಿಸಲಾಗದ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಿದ್ದ. ಪ್ರತಿ ಸೂರ್ಯೋದಯದ ಮೊದಲ ಕಿರಣದಿಂದಲೇ ಅಪರಾಧ ಮತ್ತು ನಶೆಯ ಪಾಶಗಳಿಂದ ತಪ್ಪಿಸಿಕೊಳ್ಳುತ್ತಾ, ತನ್ನ ಅಣ್ಣನೊಂದಿಗೆ ಪುಟ್ಟ ಪುಟ್ಟ ಕೈಗಳನ್ನು ಬಟ್ಟಲಾಗಿ ಮಾಡುತ್ತ, ಅದರಲ್ಲಿ ಬೈಗುಳ, ಅವಮಾನ ಹಾಗು ಕೆಲವು ಪುಡಿಗಾಸುಗಳಿಂದ ಅದನ್ನು ತುಂಬುತ್ತಿದ್ದ. ಅಂದು ಭಿಕ್ಷೆ ಬೇಡುತ್ತಿದ್ದ ಎರಡೂ ಕೈಗಳು ಇಂದು ಭಿಲ್ವಾಡಾದ ದೇವನಾರಾಯಣ ಹೋಟೆಲಿನಲ್ಲಿ ರುಚಿಕರ ಭೋಜನವನ್ನು ತಯಾರಿಸಿ ಎಲ್ಲರ ಹೊಟ್ಟೆಯನ್ನೂ ತುಂಬಿಸುತ್ತಿವೆ ಎಂದರೆ ಅವನಿಗೆ ನಂಬಿಕೆಯೇ ಬರುತ್ತಿಲ್ಲ.


ತನ್ನ ಜೀವನದಲ್ಲಿ ಉಂಟಾದ ಈ ಅದ್ಭುತ ಪರಿವರ್ತನೆಗೆ ಕಾರಣರಾದ ಸಂಘದ ಸ್ವಯಂಸೇವಕರಾದ 66 ವರ್ಷದ ಶ್ರೀ ಜಯಂತಿ ಭಾಯಿ ಮತ್ತು ಅವರ ಪತ್ನಿ ಅರುಣಾ ಬೆನ್ ಅವರ ಗುಣಗಾನವನ್ನು ಮಾಡುವುದು ಅವನಿಗೆ ಸಾಕು ಎನಿಸುವುದೇ ಇಲ್ಲ. ಬರ, ಭೂಕಂಪ, ಕೊರೋನಾ ಮುಂತಾದ ಅನೇಕ ವಿಪತ್ತುಗಳು ದೇಶದಲ್ಲಿ ಎದುರಾದ ಸಂದರ್ಭದಲ್ಲಿ ಮುಂದೆ ಬಂದು, ಹಲವು ದಿನಗಳ ಕಾಲ  ಪೀಡಿತ ಸ್ಥಳಗಳಲ್ಲಿ ಇದ್ದು ಪೀಡಿತರ ಸೇವೆಯನ್ನು ಮಾಡುತ್ತಿರುವ ಗುಜರಾತಿನ ಈ ಹಿರಿಯ ದಂಪತಿಗಳು ಎಲ್ಲರಿಗೂ ಪ್ರೇರಣದಾಯಕರಾಗಿದ್ದಾರೆ. ಸಾಮಾನ್ಯವಾಗಿ ವಯಸ್ಸಾದ ಮೇಲೆ ಜನರು ತಮಗೋಸ್ಕರ ಸಹಾಯವನ್ನು ಅಪೇಕ್ಷಿಸುತ್ತಾರೆ. ಆದರೆ ಈ ಇಳಿವಯಸ್ಸಿನಲ್ಲಿ ಜಯಂತಿ ಭಾಯಿ ಮತ್ತು ಅರುಣಾ ಬೆನ್ ಗುಜರಾತಿನ ಮೆಹಸಾಣಾದಲ್ಲಿ "ಬಾಲ ಭಿಕ್ಷುಕ ಮುಕ್ತ ಶಿಕ್ಷಿತ ಸಮಾಜ" ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ. 


ಜಯಂತಿ ಭಾಯಿ ಹೇಳುತ್ತಾರೆ 2000ನೇ ಇಸವಿಯಿಂದ ಮೆಹಸಾಣಾದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದ ಮೂಲಕ ಇಂದು ಸುಮಾರು 245 ಟೆಂಟುಗಳನ್ನು ನಿರ್ಮಿಸಲಾಗಿದೆ. ಭಿಕ್ಷೆ ಬೇಡುತ್ತಿದ್ದ ಮಕ್ಕಳು ಈಗ ಸಮಾಜದ ಸಹಯೋಗದಿಂದ ಈ ಟೆಂಟುಗಳಲ್ಲಿ ಇದ್ದುಕೊಂಡು  ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇಲ್ಲಿ ಇವರ ವಾಸ್ತವ್ಯ, ಆಹಾರ, ಶಿಕ್ಷಣಕ್ಕಾಗಿ  ಯಾವುದೇ ಶುಲ್ಕ ಇರುವುದಿಲ್ಲ. ಇಲ್ಲಿ ವಾಸಿಸುವ ಮಕ್ಕಳು ಅಪರಾಧ ಹಾಗು  ಭಿಕ್ಷಾಟನೆಯ ಚಕ್ರವ್ಯೂಹದಿಂದ ಬಿಡಿಸಿಕೊಂಡು ತಮ್ಮ ಜೀವನದ ಹೊಸಾ ದಿಕ್ಕಿನಲ್ಲಿ ಆತ್ಮನಿರ್ಭರರಾಗಿಯೂ ಬೆಳೆಯುತ್ತಿದ್ದಾರೆ. 

ಗುಜರಾತಿನ ಪ್ರಾಂತ ಸಹ ಸೇವಾಪ್ರಮುಖರಾದ ಅಶ್ವಿನ್ ಕಡೇಚಾ ಹೇಳುತ್ತಾರೆ 

 1984 ರಿಂದ 1992 ರವರೆಗೆ  ಪಾಲನಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಗರ ಕಾರ್ಯವಾಹಕರಾಗಿದ್ದ ಶ್ರೀ ಜಯಂತಿ ಭಾಯಿ ಪಟೇಲ್ ಜೀ ಅವರು 2000 ನೇ ಇಸವಿಯ ತನಕ ಲಘು ಉದ್ಯೋಗ ಭಾರತಿ ವಿಭಾಗದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು.ಪಾಲನಪುರದಲ್ಲಿ ವಿವಿಧ ವಿದ್ಯಾಲಕ್ಷ್ಮಿ ಮಂದಿರದಲ್ಲಿ ಪಾಲಕ ಸಮಿತಿಯ ಅಧ್ಯಕ್ಷರಾದ ಕಾರಣ ಅವರು ಮಕ್ಕಳೊಂದಿಗೆ ಬಹಳ ಸಂವೇದನಾಶೀಲರಾಗಿದ್ದರು. ಅರಾವಳಿಯ  ಪರ್ವತ ಶ್ರೇಣಿಯ ತಪ್ಪಲಲ್ಲಿರುವ ವನವಾಸಿ ಮಕ್ಕಳು ವಸ್ತ್ರರಹಿತರಾಗಿ ಬಿಲ್ಲು ಬಾಣಗಳನ್ನು ಹಿಡೀದು ಓಡಾಡುತ್ತಿರುವುದನ್ನು ನೋಡಿ ಸೇವಾಮನೋಭಾವದ ಈ ದಂಪತಿಯ ಹೃದಯ ತುಂಬಿಬರುತ್ತಿತ್ತು.

ಅಂದು ಪ್ರತಿ ಮಹಿಳೆಯಿಂದ ತಿಂಗಳಿಗೆ ಹತ್ತು ರೂಪಾಯಿಗಳನ್ನು ತೆಗೆದುಕೊಂಡು ಸುಮಾರು 500 ಮಹಿಳೆಯರ ಒಂದು ಮಂಡಳಿಯನ್ನು ಮಾಡಿ ಸೇವಾ ಬಸತಿಗಳ ಗುಡಿಸಲುಗಳಲ್ಲಿ ಬಾಲಸಂಸ್ಕಾರ ಕೇಂದ್ರವನ್ನು ಪ್ರಾರಂಭ ಮಾಡಲಾಯಿತೋ ಅದು ಇಂದು  ಸರಸ್ವತಿ ಶಿಶುಮಂದಿರ ಎಂಬ ಹೆಸರಿನ ಮೂಲಕ ಜನಪ್ರಿಯವಾಗಿದೆ ಎಂದು ಅರುಣಾ ಬೆನ್ ಹೇಳುತ್ತಾರೆ. ಒಬ್ಬ ನಿಜವಾದ ಸ್ವಯಂಸೇವಕನ ಕಣ್ಣುಗಳು ಸದಾ ಸೇವಾಕಾರ್ಯವನ್ನು ಹುಡುಕುತ್ತಿರುತ್ತದೆ. 2000ನೇ ಇಸವಿಯಲ್ಲಿ ಮೆಹಸಾಣಾದಿಂದ ವರ್ಗಾವಣೆಯಾದ ಮೇಲೆ ಜಯಂತಿ ಭಾಯಿ ಬೀದಿಬದಿಯಲ್ಲಿ ವಾಸಿಸುತ್ತಿದ್ದ, ಭಿಕ್ಷೆ ಬೇಡುತ್ತಿದ್ದ ಮಕ್ಕಳನ್ನು ನೋಡಿದಾಗ ಅವರ ಮನಸ್ಸು ವಿಚಲಿತವಾಯಿತು.  ಹೊಟ್ಟೆಯ ಹಸಿವು ಆಹಾರಕ್ಕಾಗಿ ಕೈಚಾಚುವ ಪರಿಸ್ಥಿತಿಯನ್ನು ತಂದುಕೊಡುತ್ತದೆ, ಇಲ್ಲದಿದ್ದರೆ ಭಿಕ್ಷೆ ಬೇಡುವುದು ಯಾರಿಗೆ ತಾನೇ ಸಂತೋಷ ಕೊಡುತ್ತದೆ?? ಇಂಥಹ ಹಲವು ಪ್ರಶ್ನೆಗಳನ್ನು ಚಿಂತಿಸುತ್ತಾ ಜಯಂತಿ ಭಾಯಿ 2000 ದ ಇಸವಿಯಲ್ಲಿ ತಮ್ಮ ಅಕ್ಕಪಕ್ಕದಲ್ಲಿದ್ದ ಆರರಿಂದ ಹದಿನೈದು ವರ್ಷದವರೆಗಿನ ಬೇರೆಬೇರೆ ನಗರ ಮತ್ತು ರಾಜ್ಯಗಳಿಂದ ಬಂದಿದ್ದ 18 ಮಕ್ಕಳ ವಿಚಾರಣೆ ನಡೆಸಿ, ಜಿಲ್ಲಾಧಿಕಾರಿಗಳ  ಅನುಮೋದನೆಯೊಂದಿಗೆ ಸರ್ಕಾರಿ ಜಮೀನಿನಲ್ಲಿ 16 ಟೆಂಟುಗಳನ್ನು ಸಿದ್ಧಮಾಡಿದರು ಮತ್ತು 45 ಮಕ್ಕಳು ಪಾಲಕರೊಂದಿಗೆ ವಾಸಿಸಲು ಪ್ರಾರಂಭಿಸಿದರು. ಇರಲು ಉಣಲು ಮತ್ತು ತೊಡಲು ಅನುಕೂಲಗಳಾದ ಮೇಲೆ ಮಕ್ಕಳ ಬುದ್ಧಿಶಕ್ತಿ ರಚನಾತ್ಮಕವಾಗಿ  ಬೆಳೆಯತೊಡಗಿತು. ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆ ಮಕ್ಕಳನ್ನು ಯೋಗ್ಯ ಶಾಲೆಗಳಲ್ಲಿ ದಾಖಲಿಸಲಾಯಿತು. ಭಿಕ್ಷಾವೃತ್ತಿಯನ್ನು ಬಿಟ್ಟು 300ಕ್ಕೂ ಅಧಿಕ ಮಕ್ಕಳು ಶಾಲೆಗಳಲ್ಲಿ ಇಂದು ಭರ್ತಿ ಆಗಿದ್ದಾರೆ. ಪ್ರತಿವರ್ಷ ಅವರಿಗೆ ಶಾಲೆಯ ಹೊಸ ಸಮವಸ್ತ್ರ, ಚಪ್ಪಲಿ, ಸ್ಕೂಲ್ ಬ್ಯಾಗ್ ಮತ್ತು ಪುಸ್ತಕಗಳ ವ್ಯವಸ್ಥೆಯನ್ನು ಬಹಳ ಉತ್ಸಾಹ ಮತ್ತು ಖುಷಿಯಿಂದ ಜಯಂತಿ ಭಾಯಿ ಮತ್ತು ಅರುಣಾ ಬೆನ್ ಖುದ್ದಾಗಿ ಮಾಡುತ್ತಾರೆ. ವರ್ಷದಲ್ಲಿ ಒಮ್ಮೆ ಶೈಕ್ಷಣಿಕ ಪ್ರವಾಸಕ್ಕೂ ಕರೆದೊಯ್ಯುತ್ತಾರೆ.

ಕಳೆದ 20 ವರ್ಷಗಳಿಂದ ನಡೆದು ಬರುತ್ತಿರುವ ಈ ಯೋಜನೆಯು ಮೀಠಾರಾಮನಂತಹ 200 ಯುವಕ ಯುವತಿಯರಿಗೆ ಅಡುಗೆ, ಡ್ರೈವಿಂಗ್, ಪ್ಲಂಬಿಂಗ್ ಕೆಲಸ ಹಾಗು ಬೇರೆಬೇರೆ ಫ್ಯಾಕ್ಟರಿಗಳಲ್ಲಿ  ಕೆಲಸ ಮಾಡುವ ಮೂಲಕ ತಮ್ಮ ಕಾಲ ಮೇಲೆ ನಿಲ್ಲಲು ಪ್ರೇರಣೆ ಹಾಗು ಶಕ್ತಿಯನ್ನು ನೀಡುತ್ತಿದೆ. ಇಂದು ಅವರೆಲ್ಲ ಆತ್ಮನಿರ್ಭರರಾಗಿ ಸ್ವತ: ತಮ್ಮ ಬದುಕನ್ನು ನೋಡೀಕೊಳ್ಳುವುದಲ್ಲದೇ ಇತರರಿಗೂ ಸಹಯೋಗ ನೀಡುತ್ತಿದ್ದಾರೆ. ಸುಮಾರು 10ಕ್ಕೂ ಹೆಚ್ಚಿನ ಪರಿವಾರಗಳು ಇಂದು ತಮ್ಮ ತಮ್ಮ ಸ್ವಂತ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು 22 ಪರಿವಾರಗಳು ಇದೇ ದಿಕ್ಕಿನಲ್ಲಿ ಸಾಗುತ್ತಿವೆ.


ಸೇವಾಭಾವ ಇರುವ ವ್ಯಕ್ತಿಗೆ ಪ್ರತಿಯೊಂದು ಕ್ಷೇತ್ರವೂ ಪ್ರೇರಣೆ ನೀಡುತ್ತದೆ. ಪ್ರಾರಂಭದಿಂದಲೂ ಗಿಡ ನೆಡುವುದನ್ನು ಪ್ರೋತ್ಸಾಹಿಸುವ ಮೂಲಕ ಸುಮಾರು 20,000ಕ್ಕೂ ಅಧಿಕ ಗಿಡಗಳನ್ನು ಪ್ರತಿವರ್ಷ ಸಾರ್ವಜನಿಕ ಸ್ಥಳಗಳಲ್ಲಿ ನೆಡುವ ಅಮೋಘ ಕಾರ್ಯಕ್ಕಾಗಿ 2016ರಲ್ಲಿ ಶ್ರೀ ಜಯಂತಿ ಭಾಯಿ ಪಟೇಲ್ ಅವರನ್ನು ಗುಜರಾತ್ ಸರ್ಕಾರವು ’ಗ್ರೀನ್ ಬ್ರಿಗೇಡಿಯರ್’ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತು. ಹಾಗೆಯೆ ಆಹಾರದ ಮಹತ್ವವನ್ನು ಅರಿತಿದ್ದ ಅರುಣಾ ಬೆನ್  ತಮ್ಮ ಪರಿಚಿತರ ವಿವಾಹ ಸಂದರ್ಭದಲ್ಲಿ ಮಿಕ್ಕಿದ್ದ ಶುಚಿಯಾದ ಆಹಾರವನ್ನು ನೋಡಿ ಹೊಸ ವಿಚಾರವೊಂದು ಹೊಳೆದಾಗ, 2015ರಿಂದ ಅಕ್ಷಯ ರಥದ ಪ್ರಾರಂಭವನ್ನು ಮಾಡಿದರು. ಒಂದು ಗಾಡಿಯ ಮೂಲಕ ಯಾವುದೇ ದೊಡ್ಡ ಸಮಾರಂಭದಿಂದ ಶುಚಿಯಾದ ಆಹಾರವನ್ನು ಒಟ್ಟುಗೂಡಿಸಿ, ಎರಡು ಗಂಟೆಗಳ ಒಳಗೆ ಅಗತ್ಯವಿರುವವರಿಗೆ ಮತ್ತು ಸೇವಾ ಬಸತಿಗಳಿಗೆ  ಭೋಜನವನ್ನು ತಲುಪಿಸಲಾಗುತ್ತದೆ. ಪ್ರತಿದಿನ 500 ರಿಂದ 5000 ಜನರ ಭೋಜನ ಬೇರೆ ಬೇರೆ ಜಾಗಗಳಿಗೆ ಅಕ್ಷಯ ರಥದ ಮೂಲಕ ವಿತರಿಸಲಾಗುತ್ತದೆ.     ಅಕ್ಷಯರಥದ ಸಹಾಯವಾಣಿಯ ಪ್ರಸಿದ್ಧಿಯ ಪರಿಣಾಮ ಇಂದು ಸುತ್ತಮುತ್ತಲಿನ 5 ರಿಂದ 6 ನಗರಗಳಲ್ಲಿ ಭೋಜನ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಸಂಸ್ಥೆಗಳು ಮತ್ತು ವ್ಯಕ್ತಿಗಳು  ಇದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೇವೆಯೇ ಸೇವೆಗೆ ಪ್ರೇರಣೆಯನ್ನು ಉಂಟುಮಾಡುತ್ತದೆ. ಇದೇ ಕಾರಣದಿಂದ ಇಂದು ಮೆಹಸಾಣಾದಲ್ಲಿ ಸುಮಾರು 60 ಜನರು ಜಯಂತಿ ಭಾಯಿ ಅವರನ್ನು ನೋಡಿ ತಾವೂ ನಿಸ್ವಾರ್ಥ ಭಾವದಿಂದ ಸೇವಾ ಕಾರ್ಯಗಳಲ್ಲಿ ಸಹಕರಿಸುತ್ತಿದ್ದಾರೆ. 

 “ಭಿಕ್ಷೆ  ಬೇಡಬಾರದು”.... ಎಂದು ಹೇಳುವ ಸಾವಿರಾರು ಜನ ಸಿಗಬಹುದು. ಆದರೆ  ಭಿಕ್ಷುಕರಿಗೆ ಆಶ್ರಯ ನೀಡುವವರು, ಅವರ ಕೈಹಿಡಿದು ಸ್ವಾಭಿಮಾನದಿಂದ ಆತ್ಮನಿರ್ಭರತೆಯ ಹಾದಿಯಲ್ಲಿ ನಡೆಸುವವರು, ಕಷ್ಟಗಳನ್ನು ಮೂಲದಿಂದಲೇ ಬೇರುಸಹಿತ ನಿರ್ನಾಮ ಮಾಡುವಂತಹ, ದೇಶಭಕ್ತ ಮತ್ತು ಸಮಾಜಸೇವಕರು ದೊರೆಯುವುದು... ಅತಿ ವಿರಳವೇ ಸರಿ.

1051 Views
अगली कहानी