सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ರೈತರ ಭವಿಷ್ಯವನ್ನೇ ಬದಲಾಯಿಸಿದ ಕರ್ನಾಟಕದ ಸಾವಯವ ಕೃಷಿ.

ಶ್ರೀ ಸುಬ್ರಾಯ ನಂದೋಡಿ | ದಕ್ಷಿಣ

parivartan-img

ಕೃಷಿಯ ವಿಧಾನವನ್ನು ಬದಲಾಯಿಸಿದರೆ ಮತ್ತು ಮಧ್ಯವರ್ತಿಗಳನ್ನು ಮಾರುಕಟ್ಟೆಯಿಂದ ತೊಡೆದುಹಾಕಿದರೆ ಸಣ್ಣ ಮತ್ತು ಮಧ್ಯಮ ರೈತರು ಸಹ ಸಾಕಷ್ಟು ಸಂಪಾದಿಸಬಹುದು. ಕರ್ನಾಟಕದ ಸಾವಯವ ಕೃಷಿ ಪ್ರಯೋಗ ಪರಿವಾರವು ಇದನ್ನು ನಿಜವೆಂದು ಸಾಬೀತುಪಡಿಸಿದೆ.  ಬನ್ನಿ, ಸಾಮಾನ್ಯ ರೈತ ಚಂದ್ರಪ್ರಕಾಶ್ ಅವರನ್ನು ಭೇಟಿಯಾಗೋಣ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಬಿಳಿಗೆರೆಪಾಳ್ಯ ಎಂಬ ಸಣ್ಣ ಹಳ್ಳಿಯ ರೈತ ಕಷ್ಟಪಟ್ಟು ದುಡಿದರೂ ಜೀವನ ಸಾಗಿಸಲು ಹೆಣಗಾಡುತ್ತಿದ್ದರು.

ಅವರು ತಮ್ಮ ಹೊಲದಲ್ಲಿ ಬೆಳೆಯುತ್ತಿದ್ದ ಒಂದು ಕ್ವಿಂಟಾಲ್ ರಾಗಿಗೆ ಕೇವಲ ಎರಡೂವರೆ ಮೂರು ಸಾವಿರ ರೂಪಾಯಿಗಳನ್ನು ಪಡೆಯುತ್ತಿದ್ದರು. ಇಂದು ಅವರು ಅದೇ ಒಂದು ಕ್ವಿಂಟಾಲ್ ರಾಗಿಗೆ 22,500 ರೂಪಾಯಿಗಳನ್ನು ಪಡೆಯುತ್ತಾರೆ. ಸಾವಯವ ಕೃಷಿ ಪರಿವಾರವು ಚಂದ್ರಪ್ರಕಾಶ್ ಅವರಂತಹ ಸಾವಿರಾರು ರೈತರ ಗಳಿಕೆಯಲ್ಲಿ ಅಪಾರ ಮೌಲ್ಯವರ್ಧನೆ ಮಾಡಿದೆ.  ಸಂಘದ ಹಿರಿಯ ಪ್ರಚಾರಕರಾದ ಉಪೇಂದ್ರ ಶೆಣೈ ಅವರ ಪ್ರೇರಣೆ ಮಾರ್ಗದರ್ಶನದೊಂದಿಗೆ ತೀರ್ಥಹಳ್ಳಿಯ ಪ್ರಗತಿಪರ ಸಾವಯವ ರೈತರಾದ ಪುರುಷೋತ್ತಮ ರಾವ್ ಹಾಗೂ ಅವರ ಸಹಕಾರಿ ಕಾರ್ಯಕರ್ತರ ಪ್ರಯತ್ನದಿಂದ 1990ರಲ್ಲಿ ಕೃಷಿ ಪ್ರಯೋಗ ಪರಿವಾರವು ಅನೌಪಚಾರಿಕ ರೂಪದಲ್ಲಿ ಪ್ರಾರಂಭವಾಯಿತು. ಈ ಸಂಸ್ಥೆಯ ಪ್ರೇರಣೆಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಸಾವಯವ ಕೃಷಿಕರ ಸಂಖ್ಯೆ ಹೆಚ್ಚಾಗತೊಡಗಿತು. ಪ್ರತಿ ತಾಲೂಕಿನಲ್ಲಿ ಸಾವಯವ ಕೃಷಿಕರ ಸಂಘಟನೆಯಾಗಿ ಸಾವಯವ ಕೃಷಿ ಪರಿವಾರಗಳು ಹುಟ್ಟಿಕೊಂಡವು. ತಾಲೂಕು ಸಾವಯವ ಕೃಷಿ ಪರಿವಾರಗಳ ಮಹಾಮಂಡಲವಾಗಿ ಸಾವಯವ ಕೃಷಿ ಪ್ರಯೋಗ ಪರಿವಾರವು ಕರ್ನಾಟಕ ರಾಜ್ಯದಲ್ಲಿ 2009ರಲ್ಲಿ ಪ್ರಾರಂಭವಾಯಿತು. ಪ್ರಸ್ತುತ ಸಾವಯವ ಕೃಷಿ ಪರಿವಾರವು ಸಾವಯವ ಕೃಷಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಸಂಸ್ಥೆಯಾಗಿದೆ.ಕರ್ನಾಟಕ ರಾಜ್ಯದ 175 ತಾಲೂಕುಗಳಲ್ಲಿ 15000 ಕ್ಕಿಂತಲೂ ಹೆಚ್ಚು ರೈತರನ್ನು ಸಾವಯವ ಕೃಷಿಯಲ್ಲಿ ತೊಡಗಿಕೊಂಡು ಸ್ವಾವಲಂಬಿಗಳಾಗುವಂತೆ ಮಾಡಿದೆ.


ಈ ಸಂಸ್ಥೆ ಮೂಲತಃ ಸಾವಯವ ರೈತ ಸಂಘಗಳ ಸಂಘಟನೆಯಾಗಿದ್ದು, ಸಾವಯವ ಕೃಷಿ ಮಾಡಲು ರೈತರನ್ನು ಪ್ರೇರೇಪಿಸುವುದಲ್ಲದೆ, ಅವರ ಉತ್ಪನ್ನಗಳ ಮಾರಾಟಕ್ಕಾಗಿ (Marketing) ಸಾವಯವ ಮೇಳಗಳನ್ನು ಆಯೋಜಿಸುತ್ತಿದೆ.  ಸಂಘಟನೆಯ ಪೂರ್ಣಾವಧಿ ಕಾರ್ಯಕರ್ತರು ಮತ್ತು ಸಂಘದ ಸ್ವಯಂಸೇವಕರೂ ಆದ ಸಾಗರದ ಆನಂದಜಿಯವರ ಪ್ರಕಾರ ರೈತರ ಸ್ಥಿತಿಯನ್ನು ಸುಧಾರಿಸಲು ಸಾವಯವ ಗೊಬ್ಬರಗಳ ತಯಾರಿಕೆ, ಜೈವಿಕ ಅನಿಲ ಬಳಕೆ, ಜೇನು ಸಾಕಣೆ, ಗೋಮೂತ್ರ ಮತ್ತು ಗೋಮಯವನ್ನು ಕೃಷಿಯಲ್ಲಿ ಬಳಸುವ ಬಗ್ಗೆ ಹಾಗೂ ನೆಲ ಜಲ ಸಂರಕ್ಷಣೆ ಬಗ್ಗೆ ತರಬೇತಿ ನೀಡಲಾಗಿದೆ.

ಅಷ್ಟೇ ಅಲ್ಲ, ಕೃಷಿಕ ಗ್ರಾಹಕ ಮಿಲನ ಕಾರ್ಯಕ್ರಮದ ಹೆಸರಿನಲ್ಲಿ ತಿಂಗಳಿಗೆ ಎರಡು ದಿನ ನಡೆಯುವ ಮೇಳದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶವಿದೆ. ಒಂದು ಕಾಲದಲ್ಲಿ ಕೃಷಿಯನ್ನು ಬಿಡಲು ಮನಸ್ಸು ಮಾಡಿದ ಬಳ್ಳಾರಿಯ ಶರಣಪ್ಪ ಈಗ ಸಾವಯವ ಕೃಷಿಯಲ್ಲಿ ಬೆಳೆದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಮೂಲಕ ವಾರ್ಷಿಕವಾಗಿ 4.50 ಲಕ್ಷದವರೆಗೆ ಸಂಪಾದಿಸುತ್ತಾರೆ. ಬಳ್ಳಾರಿ ಜಿಲ್ಲೆಯ ಹುಲಿಕೆರೆ ಗ್ರಾಮದ ಈ ರೈತರು ಸಾವಯವ ಕೃಷಿ ಪರಿವಾರದ ಸದಸ್ಯರಾದಾಗ ಅವರ ಜೀವನವೇ ಬದಲಾಯಿತು. ರಾಜ್ಯ ಮಟ್ಟದಲ್ಲಿ ನಡೆಯುವ ಈ ಕೃಷಿ ಸಂತೆಗಳಲ್ಲಿ ಪ್ರತಿ ತಿಂಗಳು 10 ಲಕ್ಷ ರೂಪಾಯಿಗೂ ಅಧಿಕ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ ಎಂದು ಅವರು ಹೇಳುತ್ತಾರೆ. ಸಣ್ಣ ಸಣ್ಣ ಪ್ರಯೋಗಗಳಿಂದ ದೊಡ್ಡ ಯಶಸ್ಸು ದೊರೆಯಿತು. ಒಂದು ಕಾಲದಲ್ಲಿ 60-80 ರೂಪಾಯಿಗೆ ಒಂದು ಲೀಟರ್ ದೇಸಿ ಹಸುವಿನ ಹಾಲನ್ನು ಮಾರಾಟ ಮಾಡಿದ ರೈತರು, ಅದೇ ಹಾಲಿನಿಂದ ತುಪ್ಪ ತಯಾರಿಸಿ ಒಂದು ಕೇಜಿಗೆ 2000 ರೂಪಾಯಿಗೆ ಆ ತುಪ್ಪವನ್ನು ಮಾರಾಟ ಮಾಡಲಾರಂಭಿಸಿದರು. ಹಾಗೆಯೇ ಅವರ ಕುಟುಂಬದ ಮಹಿಳೆಯರು ಸಾವಯವ ಕುಂಕುಮ ತಯಾರಿಸಲು ತರಬೇತಿ ಪಡೆದರು. ಈ ಕುಂಕುಮಕ್ಕೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯಿದೆ. ಕೆಲವರು ಜೇನುಸಾಕಣೆಯೊಂದಿಗೆ ಕೃಷಿ ಮಾಡಲು ಪ್ರಾರಂಭಿಸಿದರೆ, ಮತ್ತೆ ಕೆಲವು ರೈತರು ಗೋವಿನ ಸಗಣಿ ಗೊಬ್ಬರ ಮಾರಾಟ ಮಾಡುವ ಮೂಲಕ ಹಣವನ್ನು ಸಂಪಾದಿಸಿದರು. ರೈತರಿಗೆ ಉತ್ತಮ ಬೀಜಗಳು ದೊರೆಯಲಿ, ಬಂಜರು ಭೂಮಿ ಫಲವತ್ತಾಗಲಿ, ರೈತರು ನೆಲ ಜಲ ಸಂರಕ್ಷಣೆಯನ್ನು ಅಳವಡಿಸಿಕೊಳ್ಳಲಿ, ನೀರಾವರಿಯಲ್ಲಿ ಸ್ವಾವಲಂಬಿಗಳಾಗಲಿ ಮತ್ತು ಸಾವಯವ ಕೃಷಿ ಸುಲಭವಾಗಲಿ ಎಂಬ ಉದ್ದೇಶದಿಂದ ಈ ಎಲ್ಲ ಕ್ಷೇತ್ರಗಳಲ್ಲಿ ರೈತರಿಗೆ ತರಬೇತಿ ನೀಡಲಾಗಿದೆ. ಪ್ರತಿ 2 ಗಂಟೆ 15 ನಿಮಿಷಕ್ಕೆ ಒಬ್ಬರಂತೆ ರೈತರ ಆತ್ಮಹತ್ಯೆ ನಡೆಯುವ ಭಾರತದಲ್ಲಿ, ಕೃಷಿ ಪ್ರಯೋಗ ಪರಿವಾರವು ರೈತರಿಗೆ ಬದುಕಲು ಹೊಸ ದಾರಿಯನ್ನು ತೋರಿಸಿದೆ. ಸಂಘಟನೆಯ ಸಾವಯವ ಮೇಳದ ಚಟುವಟಿಕೆಗಳಿಗೆ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ಮತ್ತು ಯೂತ್ ಫಾರ್ ಸೇವಾದ ಸಂಪೂರ್ಣ ಸಹಕಾರವಿದೆ.


ಸಂಪರ್ಕ ಮಾಡಿ.

ಆನಂದ ಸಾಗರ: 9448204831

ಅರುಣ ತೀರ್ಥಹಳ್ಳಿ: 9449623275
816 Views
अगली कहानी