सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಸೇವೆಗೆ ಪರ್ಯಾಯವಾದ ಒಂದು ಹೆಸರು - ವಿಷ್ಣು ಕುಮಾರಜೀ

ಶ್ರೀಮತಿ ಬಿ.ಎನ್ ಎಲಮಲ್ಲಿ | ದಕ್ಷಿಣ

parivartan-img

1950 ನೇ ದಶಕದಲ್ಲಿ ಓರ್ವ 23 ವರ್ಷದ ತರುಣನಿಗೆ ಶುಗರ್ ಟೆಕ್ನೋಲಜಿ ಇಂಜಿನಿಯರಿಂಗ್ ಡಿಗ್ರೀ ಮತ್ತು ಹಿಂದುಸ್ತಾನ ಎರೋನೊಟಿಕ್ಸ್ ಲಿಮಿಟೆಡ್ ನ ಉದ್ಯೋಗ ನೇಮಕಾತಿ ಪತ್ರ ಇವೆರಡನ್ನು ಹೊಂದಿರುವದಕ್ಕಿಂತ ಹೆಚ್ಚಿನ ವೃತ್ತಿಯ ಆರಂಭ ಇನ್ನೇನು ಆಗಬಹುದಾಗಿತ್ತು? ಆದರೆ ಬೆಂಗಳೂರಿನಿಂದ 90 ಕಿ.ಮೀ. ದೂರದ ಅಕ್ಕಿರಾಮಪುರದ ಶ್ರೀಮಂತ ರಾಜೌರಿ ಕುಟುಂಬದ ಏಳನೆಯ ಸಂತಾನವಾದ ಈ ತರುಣನ ಕನಸುಗಳು ಬಾಕಿ ಜಗತ್ತಿಗಿಂತ ತೀರ ವಿಭಿನ್ನವಾಗಿದ್ದವು. ಆ ತರುಣನಿಗೆ ಕೊಳೆಗೇರಿಗಳಲ್ಲಿ ವಾಸವಾಗಿದ್ದ ಬಡ ಮತ್ತು ನಿರ್ಗತಿಕ ಜನರ ಜೀವನಮಟ್ಟ ಸುಧಾರಿಸುವ ದಿಶೆಯಲ್ಲಿ ಸೇವೆ ಮಾಡುವ ಆಶಯವಿತ್ತು. ನಿರಾಶ್ರಿತರಾಗಿ ಬೀದಿಗೆ ಬಿದ್ದ ಮಕ್ಕಳಿಗೆ ಗೌರವಯುತ ಆಶ್ರಯ ಮತ್ತು ಜೀವನ ಕೊಡುವ ಆಸೆಯಿತ್ತು. 1962 ರಲ್ಲಿ ತರುಣ ವಿಷ್ಣು ರಾಜೌರಿಯಾ ತನ್ನ ತಂದೆ ಶ್ರೀ ಅನಂತ ರಾಜೌರಿಯಾ ಅವರಿಗೆ ತನಗೆ ಸಂಘ ಪ್ರಚಾರಕನಾಗಲು ಅಪ್ಪಣೆ ಕೊಡಿ ಎಂದು ಕೇಳಿದಾಗ ಆ ಕ್ಷಣ ಅವನ ತಂದೆಗೆ ತನ್ನ ಮಗನು ಇನ್ನೆಂದಿಗೂ ಮನೆಗೆ ವಾಪಾಸು ಬರಲಾರ ಎಂದು ಗೊತ್ತಾಗಿ ಹೋಯಿತು. ಜನ್ಮಭೂಮಿ ದಕ್ಷಿಣ ಭಾರತವನ್ನು ತ್ಯಜಿಸಿ ಉತ್ತರಭಾರತದ ದೆಹಲಿಯಿಂದ ಭೋಪಾಲದವರೆಗೆ ವಿಶಾಲ ಸರಣಿಯ ವಿವಿಧ ಸೇವೆಗಳ ಜಾಲ ನಿರ್ಮಿಸಿದ ಶ್ರೇಯಸ್ಸಿದೊಂದಿಗೆ ವಿಷ್ಣೂಜಿಯವರ ಹೆಸರು ಅವರ ಜೀವನದ ಕೊನೆಯ ದಶಕದ ಹೊತ್ತಿಗೆ ಸೇವೆಗೆ ಇನ್ನೊಂದು ಹೆಸರು ವಿಷ್ಣೂಜಿ ಎಂದು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟಿತ್ತು. ಬಡವರಿಗೆ ಔಷಧಿ ಸಿಗುತ್ತಿರಲಿಲ್ಲ. ಒಂದು ವೇಳೆ ಸಿಕ್ಕಿದರೂ ಅವನ ಕಷ್ಟ ಪರಿಶ್ರಮದ ಇಡೀ ಒಂದು ದಿನದ ಗಳಿಕೆಯನ್ನು ನುಂಗಿ ಹಾಕುತ್ತಿತ್ತು. ಈ ಥರದ ಪರಿಸ್ಠಿತಿಯ ತಿರುವುಗಳು ವಿಷ್ಣೂಜಿಯವರಿಗೆ ಅತ್ಯಂತ ನೋವಿನ ವಿಷಯವಾಗಿ ದೆಹಲಿಯಲ್ಲಿ ಮೊದಲ ಸಂಚಾರೀ ವೈದ್ಯಕೀಯ ವ್ಯಾನ್ ಅಸ್ತಿತ್ವಕ್ಕೆ ಬರಲು ಕಾರಣವಾಯಿತು. ಇಂದು ಇಂಥಹ ಹಲವಾರು ವೈದ್ಯಕೀಯ ವ್ಯಾನ್ ಗಳು ಬಡ ಕೊಳೆಗೇರಿ ನಿವಾಸಿಗಳಿಗೆ ಉಚಿತ ಔಷಧಿ ,ಪ್ರಥಮ ಚಿಕಿತ್ಸೆ ಮತ್ತು ರೋಗೋಪಚಾರ ಒದಗಿಸುತ್ತಲಿವೆ. ವಿಷ್ಣೂಜಿಯವರ ಸ್ಫೂರ್ತಿ ಮತ್ತು ಮಾರ್ಗದರ್ಶನದಲ್ಲಿ ಬೀದಿಗೆ ಬಿದ್ದ ನಿರಾಶ್ರಿತ ಮಕ್ಕಳಿಗೋಸ್ಕರ ಮಾತೃಛಾಯಾಮೊದಲಬಾರಿಗೆ ದೆಹಲಿಯಲ್ಲಿ ನಂತರ ಭೋಪಾಲನಲ್ಲಿ ಸ್ಥಾಪಿಸಲ್ಪಟ್ಟಿತು. ಈಗ 36 ‘ಮಾತೃಛಾಯಾಘಟಕಗಳು ದೇಶದ ನಾನಾ ಕಡೆಗೆ ಪಸರಿಸಿ ಮಕ್ಕಳಿಲ್ಲದ ಸಾವಿರಾರು ದಂಪತಿಗಳು ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಪಿತೃತ್ವ /ಮಾತೃತ್ವಗಳ ಸುಖ ಪಡೆಯುವಂತಾಗಿದೆ.




ಇದೇ ರೀತಿ ಯುವಕರಿಗೆ ಉದ್ಯೋಗ ತರಬೇತಿ ಕೇಂದ್ರಗಳು, ಮಹಿಳೆಯರಿಗೆ ಹೊಲಿಗೆ, ಕಸೂತಿ ಕಲಿಸುವ ಕೇಂದ್ರಗಳು ಮತ್ತು ಮಕ್ಕಳಿಗೆ ಸಂಸ್ಕಾರ ಕೇಂದ್ರಗಳನ್ನು ತೆರೆಯುವದರಲ್ಲಿ ವಿಷ್ಣೂಜಿಯವರು ಪ್ರಮುಖ ಪಾತ್ರವಹಿಸಿದರು. ವಿಷ್ಣೂಜಿಯವರು ದೆಹಲಿ ಬಿಟ್ಟು ಮಧ್ಯಪ್ರದೇಶಕ್ಕೆ ಆಗಮಿಸಿ ತಮ್ಮ ಸೇವೆಯನ್ನು ಮುಂದುವರಿಸಿದಾಗ ಅಲ್ಲಿ ಅವರ ಉದಾತ್ತ ಗುರಿಯ ಸಾಧನೆಯಲ್ಲಿ ಅಸಂಖ್ಯಾತ ಜನರು ಸೇರಿಕೊಂಡರು. ಅದರ ಫಲವಾಗಿ ಮಧ್ಯಪ್ರದೇಶದ ಮೂಲೆ ಮೂಲೆಗಳಲ್ಲಿ ಸೇವಾ ಘಟಕಗಳು ಸ್ಥಾಪನೆಗೊಂಡವು. ಮಧ್ಯಕ್ಷೇತ್ರ ಸೇವಾ ಪ್ರಮುಖರಾದ ಶ್ರೀ ಗೋರೇಲಾಲ ಬಾರ್ಚೆಯವರ ಪ್ರಕಾರ ವಿಷ್ಣೂಜಿಯವರ ಪ್ರೇರಣೆ ಮತ್ತು ಮಾರ್ಗದರ್ಶನದಲ್ಲಿ 21 ಯುವ ಹೊಸ್ಟೇಲ್ ಗಳು, 6 ‘ಮಾತೃಛಾಯಾಘಟಕಗಳು ಸ್ಥಾಪನೆಗೊಂಡವಲ್ಲದೇ ಸುಮಾರು 400 ಸೇವಾನಿರ್ದೇಶಿತ ಕಾರ್ಯಕ್ರಮಗಳು ಆರಂಭಗೊಂಡವು.

ಆನಂತರ ವಿಷ್ಣೂಜಿಯವರು ಪ್ರಚಾರಕರಾಗಿ ಕಾನ್ಪುರದಿಂದ ದೆಹಲಿಗೆ ಬಂದರು. ಸಂಘದ ಸೂಚನೆಯನ್ನು ಕಾರ್ಯಗತಗೊಳಿಸುತ್ತ ಸಮಾಜದ ವಂಚಿತ ಮತ್ತು ದೀನವರ್ಗಗಳಿಗೆ ಅನೇಕ ಹೊಸ ಹೊಸ ಸೇವಾ ಯೋಜನೆಗಳನ್ನು ಆರಂಭಿಸಿದರು. ಇಂಥದೊಂದು ಯೋಜನೆ ಆರಂಭವಾದಾಗ ಅವರು ಸ್ವಯಂ ಫುಟ್ಪಾಥ್ ಮೇಲೆ ಕುಳಿತುಕೊಂಡು ಮಕ್ಕಳಿಗೆ ಪಾಠ ಹೇಳಲು ತೊಡಗಿದರು. ಇದನ್ನು ನೋಡಿದ ಒಬ್ಬ ಸಜ್ಜನರು ಓಡಿ ಬಂದು ಇವರಿಗೆ ಒಂದು ಕುರ್ಚಿಯನ್ನು ಕೊಟ್ಟರು. ಶ್ರೀ ಲಾಲಾರಾಮ ಸಿಂಘ ಗುಪ್ತಾ ಹೆಸರಿನ ಈ ಸಜ್ಜನರು ಮುಂದೆ ತಮ್ಮ ಕೊಡುಗೆಯಾಗಿ ಸೇವಾ ಭಾರತ ಸೇವಾ ಸದನ ಹೆಸರಿನ ಮೂರು ಮಹಡಿಯ ಹೋಸ್ಟೆಲ್ ನ್ನು ದೆಹಲಿಯ ಸಾವನ ಪಾರ್ಕ್ ಪ್ರದೇಶದಲ್ಲಿ ಕಟ್ಟಿಸಿಕೊಟ್ಟರು. ಇಲ್ಲಿ ಭಾರತದ ವಿವಿಧ ಪ್ರದೇಶಗಳಿಂದ ಬಡವರ ಜಾಣ ಮಕ್ಕಳು ಅಧ್ಯಯನ ಮಾಡುತ್ತಾರೆ. ಸರ್ವರೂ ಒಕ್ಕೊರಲಿನಿಂದ ಹೇಳುವಂತೆ ವಿಷ್ಣೂಜಿಯವರ 5 ಅಡಿ ಎತ್ತರದ ಬಡಕಲು ಶರೀರದಲ್ಲಿರುವ ಒಂದು ವಿರಾಟ್ ವ್ಯಕ್ತಿತ್ವ ಅನೇಕ ವ್ಯಕ್ತಿಗಳನ್ನು ಆಕರ್ಷಿಸಿ ಅವರು ತಮ್ಮ ದೈಹಿಕವಾಗಿ, ಬೌದ್ಧಿಕವಾಗಿ ಮತ್ತು ಆರ್ಥಿಕವಾಗಿ ಕೊಡುಗೆ ನೀಡುವಂತೆ ಪ್ರೇರೇಪಿಸುತ್ತದೆ. ಅವರಲ್ಲಿ ಕೆಲವರು ತಮ್ಮ ಇಡೀ ಜೀವನವನ್ನು ಈ ಸೇವಾಕಾರ್ಯಕ್ಕೆ ಧಾರೆ ಎರೆದಿದ್ದಾರೆ.




ವಿಶ್ವ ಹಿಂದು ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಶ್ಯಾಮಜೀ ಗುಪ್ತಾ ಮತ್ತು ಸ್ವಾಂತ ರಂಜನ್ ಜೀ ಮುಂತಾದ ಯುವಕರು ವಿಷ್ಣೂಜಿಯವರಿಂದ ಪ್ರೇರಿತರಾಗಿ ಸಂಘ ಪ್ರಚಾರಕರಾಗಿ ವಿಶಿಷ್ಟ ಮತ್ತು ಉದಾತ್ತ ಕಾರ್ಯಗಳನ್ನು ಕೈಗೊಂಡರು. ವಿಷ್ಣೂಜಿಯವರ ಜೊತೆ ಹಲವಾರು ವರ್ಷ ಕಳೆದ ಹಿರಿಯ ಪ್ರಚಾರಕ ಮತ್ತು ಸೇವಾ ಅಂತಾರಾಷ್ಟ್ರೀಯ ಸಂಸ್ಥೆಯ ಅಂತಾರಾಷ್ಟ್ರೀಯ ಸಂಯೋಜಕ ಶ್ರೀ ಶ್ಯಾಮ ಪರಾಂಡೆಯವರು ಹೇಳುವ ಪ್ರಕಾರ ವಿಷ್ಣೂಜಿಯವರು ದಾನಿಗಳ ಹೃದಯಗಳ ಮೇಲೆ ಅಕ್ಷರಶಃ ರಾಜ್ಯವಾಳುತ್ತಿದ್ದರು. ವಿಷ್ಣೂಜಿಯವರು ಒಂದು ಯೋಜನೆಗೆ ಹೊಳಹು ಹಾಕಿ ಅಂದಾಜು ವೆಚ್ಚ ಲೆಕ್ಕ ಹಾಕುತ್ತಿದ್ದಂತೆಯೇ ದಾನಿಗಳಿಂದ ಆರ್ಥಿಕ ಸಹಾಯ ಸಿದ್ಧವಾಗಿರುತ್ತಿತ್ತು. ಹೊಸದಿಲ್ಲಿಯ ಗೋಪಾಲಧಾಮ ಹೋಸ್ಟೆಲ್ಲಿಗೂ, ಭೋಪಾಲದ ಸೇವಾಧಾಮ ಮಂದಿರಗಳ ನಿರ್ಮಾಣಕ್ಕೂ ಯಾರೋ ಒಬ್ಬರು ಸ್ಟೀಲನ್ನೋ, ಇನ್ಯಾರೋ ಒಬ್ಬರು ಇಟ್ಟಿಗೆಗಳನ್ನೋ, ಮತ್ಯಾರೋ ಒಬ್ಬರು ಸಿಮೆಂಟನ್ನೋ ವಿಷ್ಣೂಜಿಯವರು ಕೇಳುತ್ತಿದ್ದಂತೆಯೇ ಉಚಿತವಾಗಿ ನೀಡುತ್ತಿದ್ದರು. ವಿಷ್ಣೂಜಿಯವರು ಹುಷಾರಿಲ್ಲದೇ ಮೃತ್ಯುಶಯ್ಯೆಯ ಮೇಲೆ ಪವಡಿಸಿದಾಗ ದಾನಿಗಳ ಹತ್ತಿರ ಫೋನಿನಲ್ಲಿ ಮಾತನಾಡಿದರೆ ಸಾಕು, ಸೇವಾ ಯೋಜನೆಗಳಿಗೆ ಹಣ ಸಹಾಯ ಬಂದು ಬಿಡುತ್ತಿತ್ತು.

ವಿಷ್ಣೂಜಿಯವರು ಸೇವಾಕಾರ್ಯದಲ್ಲಿ ಎಷ್ಟೊಂದು ತೊಡಗಿಬಿಟ್ಟಿದ್ದರೆಂದರೆ ಅವರ ಹೆಸರಿನ ಪ್ರಚಾರವು ಸೇವಾ ಭಾರತಿಯ ಹೆಸರಲ್ಲಿ ಆಗುವದೂ ಸಹ ಇಷ್ಟವಿರಲಿಲ್ಲ. ದೆಹಲಿಯ ಹಿರಿಯ ಸ್ವಯಂಸೇವಕ ಮಾಯಾರಾಮ ಮಾತಂಗ ಇವರು ವಿಷ್ಣೂಜಿಯವರ ಜೀವನ ಮತ್ತು ಸಾಧನೆಗಳ ಬಗ್ಗೆ ಪುಸ್ತಕ ರಚಿಸಬೇಕು ಎಂದು ಇಚ್ಛೆ ವ್ಯಕ್ತಪಡಸಿದಾಗ ಅವರು ಖಡಾಖಂಡಿತವಾಗಿ ನಿರಾಕರಿಸಿದರು. ಅವರು ಬದುಕಿರುವವರೆಗೆ ಇದು ಸಾಧ್ಯವಿಲ್ಲವೆಂದು ಹೇಳಿದರು. ನನ್ನ ಏಕಮೇವ ಅಸ್ಮಿತೆ ಸೇವಾ ಭಾರತಿಗೆ ಸೇರಿದ್ದು ಎಂದು ಹೇಳಿದರು. ವಿಷ್ಣೂಜಿಯವರು ಇಷ್ಟೊಂದು ಬದ್ಧತೆ ಮತ್ತು ಸೇವಾಧ್ಯೇಯಗಳಿಂದ ಬಿತ್ತಿದ ಸೇವಾ ಬೀಜವು ಈಗ ಬೆಳೆದು ಹೆಮ್ಮರವಾಗಿದೆ. ವಿವಿಧ ಸೇವಾ ಯೋಜನೆಗಳ ಮುಖಾಂತರ ದೇಶದ ತುಂಬಾ ದೀನ ಮತ್ತು ನಿರ್ಗತಿಕ ಜನರಿಗೆ ಅಪಾರ ಸಹಾಯ ಒದಗಿಸುತ್ತಲಿದೆ.

ವಿಷ್ಣೂಜಿಯವರ ಬಗ್ಗೆ ತಿಳಿದುಕೊಳ್ಳಲು ಬಯಸುವವರು ಸಂಘದ ಸರಕಾರ್ಯವಾಹ ಮಾನ್ಯ ಶ್ರೀ ಭೈಯ್ಯಾಜೀ ಜೋಷಿಯವರ ಈ ಪದಗಳಲ್ಲಿ ಕಂಡುಕೊಳ್ಳಬಹುದು. " ವಿಷ್ಣೂಜೀಯವರು ಸಾಧನಗಳಿಗೋಸ್ಕರ ಯಾವತ್ತೂ ಕಾಯ್ದುಕೊಂಡು ನಿಲ್ಲಲಿಲ್ಲ. ಯಾವತ್ತೂ ಬೇಕಾದ ಸಹಾಯ ಸಿಕ್ಕಲಿಲ್ಲವೆಂದು ಪರದಾಡಲಿಲ್ಲ, ದಣಿಯಲಿಲ್ಲ. ಯಾವತ್ತೂ ವ್ಯತಿರಿಕ್ತ ಪರಿಸ್ಥಿತಿಗಳೆದುರು ಬಗ್ಗಲಿಲ್ಲ."

1291 Views
अगली कहानी