सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

5 mins read

ಜಲಸಮಾಧಿಯಿಂದ ಬದುಕುಳಿದ ಸಾವಿರಾರು ಜೀವಗಳು-ಗುಜರಾತಿನ ಭೀಕರ ಪ್ರವಾಹದಲ್ಲಿ ಸ್ವಯಂಸೇವಕರ ಭಗೀರಥ ಪ್ರಯತ್ನ.

ಶ್ರೀ ಗಿರಿಧರ್ ಉದ್ಯಾವರ | ದಕ್ಷಿಣ

parivartan-img

ಸಾಮಾನ್ಯವಾಗಿ ಆಪತ್ತುಗಳು ಹೇಳಿಕೇಳಿ ಬರುವುದಿಲ್ಲವಾದರೂ, ಕೆಲವೊಮ್ಮೆ ತುತ್ತೂರಿ ಮೊಳಗಿಸುತ್ತಾ ಬರುವುದೂ ಉಂಟು. 2017ರ ಜುಲೈ ತಿಂಗಳಿನಲ್ಲಿ ಗುಜರಾತಿನಲ್ಲಿ ಆದದ್ದೂ ಇದೇ. ರಾಜಸ್ಥಾನದ ಜೈತಪುರ ಅಣೆಕಟ್ಟಿನಿಂದ ಹೊರಹರಿದ ನೀರು ಗುಜರಾತ್ ಸಮೀಪಿಸುತ್ತಿದ್ದಂತೆ ಭೀಕರ ಪ್ರವಾಹವಾಗಿ ಬದಲಾಯಿತು. ಯಾವ ಜನರು ತಮ್ಮ ಊರುಗಳಲ್ಲಿ 2 ಅಡಿ ನೀರನ್ನೂ ಎಂದಿಗೂ ಕಂಡಿರಲಿಲ್ಲವೋ, ಸರ್ಕಾರ ನೀಡಿದ ಅಪಾಯದ ಮುನ್ನೆಚ್ಚರಿಕೆಯನ್ನು ಅವರು ಕಡೆಗಣಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ವಿಪತ್ತಿನ ಸುಳಿವು ಸಿಗುತ್ತಿದ್ದಂತೆಯೇ ಪ್ರವಾಹಪೀಡಿತ ಪ್ರದೇಶದ ಊರುಗಳತ್ತ ಧಾವಿಸಿದ ಸ್ವಯಂಸೇವಕರು ರಕ್ಷಣಾಯೋಜನೆ ರೂಪಿಸಿದರು ಮತ್ತು ತಮ್ಮ ಜಾಗರೂಕತೆ ಹಾಗೂ ಎಡೆಬಿಡದ ಪರಿಶ್ರಮದಿಂದ ಸಾವಿರಾರು ಪ್ರಾಣಗಳನ್ನು ಉಳಿಸಿದರು.

ಜೈತಪುರ ಜಲಾಶಯದಿಂದ ಉಕ್ಕಿ ಗುಜರಾತಿನ ಕಡೆಗೆ ನುಗ್ಗುತ್ತಿರುವ ಹುಚ್ಚುಹೊಳೆಯ ಕುರಿತಾಗಿ ಸರಕಾರ ಎಚ್ಚರಿಕೆ ನೀಡಿದೊಡನೆಯೇ ಸ್ವಯಂಸೇವಕರ ರಕ್ಷಣಾಪಡೆ ಸಜ್ಜಾಗಿಬಿಟ್ಟಿತ್ತು. ಜುಲೈ 23ರ ರಾತ್ರಿ ಒಂದು ಗಂಟೆಗೆ ಪಾಲನಪುರ ಜಿಲ್ಲಾ ಸೇವಾ ಪ್ರಮುಖರಾದ ಗೋವಿಂದಭಾಯಿ ಪ್ರಜಾಪತಿ ಅವರಿಗೆ ರಾಜಸ್ಥಾನದ ಜಲಾಶಯದ ನೀರು ಗುಜರಾತಿನೆಡೆಗೆ ವೇಗವಾಗಿ ಸಾಗುತ್ತಿರುವ ಮಾಹಿತಿ ತಲುಪಿತು. ಕೂಡಲೇ ಧಾನೇರಾಬನಾಸ್ಕಾಂಠಾ ಹಾಗೂ ಡೀಸಾ ಮುಂತಾದೆಡೆಯ ಹಿರಿಯ ಸ್ವಯಂಸೇವಕರ ನಡುವೆ ತುರ್ತು ಸಮಾಲೋಚನೆಗಳು ಮೊಬೈಲ್ ಮುಖಾಂತರವೇ ನಡೆದುಬಂದೆರಗಿರುವ ಸಂಕಷ್ಟವನ್ನು ಎದುರಿಸಲೆಂದು ಸಮಿತಿಯೊಂದರ ರಚನೆಯಾಯಿತು.


ಆ ಸಮಿತಿಯ ಆದೇಶದ ಅನ್ವಯ ತಂತಮ್ಮ ಸುರಕ್ಷಿತ ನೆಲೆಗಳಿಂದ ಹೊರಟ ಸ್ವಯಂಸೇವಕರು ತಂಡೋಪತಂಡವಾಗಿ ನೆರೆಪೀಡಿತ ತಗ್ಗು ಪ್ರದೇಶಗಳಿಗೆ ಧಾವಿಸತೊಡಗಿದರು. ಮೈಕ್ ಅಳವಡಿಸಿದ ವಾಹನಗಳಿಂದ ಅಪಾಯದ ಪ್ರದೇಶದ ಹಳ್ಳಿಗಳಿಗೆಲ್ಲಾ ಬರಲಿರುವ ವಿಪತ್ತಿನ ಮುನ್ಸೂಚನೆಯನ್ನು ರಾತ್ರಿಯಿಡೀ ಅನೌನ್ಸ್ಮೆಂಟ್ ಮೂಲಕ ಸಾರಲಾಯಿತು. ಧಾನೇರಾ ತಾಲೂಕೊಂದರಲ್ಲೇ ಸುಮಾರು 8000 ಜನರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಯಿತು. ವರದಿಯೊಂದರ ಪ್ರಕಾರ ಸದರಿ ಆಪತ್ಕಾಲದಲ್ಲಿ 1871 ಸ್ವಯಂಸೇವಕರು ಹಗಲಿರುಳೂ ಶ್ರಮಿಸಿದರು. ಈ ಸೇವಾಕಾರ್ಯದಲ್ಲಿ ಸುಮಾರು ಐದೂವರೆ ಲಕ್ಷ ಊಟದ ಪೊಟ್ಟಣಗಳನ್ನು, 23 ಸಾವಿರಕ್ಕೂ ಹೆಚ್ಚು ದಿನಸಿ ಕಿಟ್ಟುಗಳನ್ನು, ಅಸಂಖ್ಯ ನೀರಿನ ಬಾಟಲಿಗಳನ್ನು, ಹಾಸಿಗೆ, ಬಟ್ಟೆ ಮತ್ತು ಡೇರೆಗಳನ್ನು ಸಂತ್ರಸ್ತ ಕುಟುಂಬಗಳಿಗೆ ಸ್ವಯಂಸೇವಕರು ಹಂಚಿದರು. RSS ನ ಹಿತೈಷಿಗಳಾದ 123 ವೈದ್ಯರುಗಳ ತಂಡವು ಜಲಾವೃತ ಪ್ರದೇಶಗಳಲ್ಲಿ ನಡೆಸಿದ 202 ವೈದ್ಯಕೀಯ ಶಿಬಿರಗಳ ಮೂಲಕ 23,242 ಜನರು ಶುಶ್ರೂಷೆ ಪಡೆದರು.

ಗುಜರಾತಿನ ಈ ಭೀಕರ ಪ್ರವಾಹದ ಪರಿಣಾಮಗಳು ಅತ್ಯಂತ ದುಃಖದಾಯಕವಾಗಿದ್ದವು. ಗುಜರಾತಿನ ಉತ್ತರಭಾಗದ ಬನಾ‌ಸ್ಕಾಂಠಾ ಜಿಲ್ಲೆಯ ಧಾನೇರ, ದಾಂತೀವಾಡಾ, ಅಮೀರಗಢ, ಡೀಸಾ, ಲಾಖನಿಗಳಲ್ಲೇ ಒಂದು ಲಕ್ಷಕ್ಕೂ ಅಧಿಕ ಜಾನುವಾರು ಮತ್ತು ನೂರಕ್ಕೂ ಹೆಚ್ಚು ಮನುಷ್ಯರು ಮಲಗಿದಲ್ಲೇ ಸಾವಿಗೆ ತುತ್ತಾದರು. ಅಸುನೀಗಿದ ಜನರಲ್ಲಿ ಬಹುತೇಕರು ಸ್ವಯಂಸೇವಕರ ಎಚ್ಚರಿಕೆಯನ್ನು ನಿರ್ಲಕ್ಷಿಸಿದವರು ಅಥವಾ ಮೈಕ್ ಘೋಷಣೆ ತಲುಪದ ಪ್ರದೇಶಗಳ ನಿವಾಸಿಗಳಾಗಿದ್ದವರು. ಕಾಂಕರೇಜ ತಾಲೂಕಿನ ಖಾರಿಯಾ ಗ್ರಾಮದಲ್ಲಂತೂ ಒಂದೇ ಕುಟುಂಬದ 17 ಜನರನ್ನು ನಿದ್ದೆಯಲ್ಲೇ ನೀರು ನುಂಗಿಹಾಕಿತ್ತು. ಪ್ರವಾಹವಿಳಿದ ಬಳಿಕ ಆ ಪಾರ್ಥಿವ ಶರೀರಗಳ ಅಂತಿಮಸಂಸ್ಕಾರದ ವೇಳೆ ದುಃಖತಪ್ತ ಬಂಧುಗಳ ಸಂಗಡ ಕೆಲ ತರುಣ ಸ್ವಯಂಸೇವಕರೂ ಕಣ್ಣೀರ್ಗರೆಯುತ್ತಿದ್ದ ದೃಶ್ಯ ಕರುಳ ಕಿವುಚುವಂತಿತ್ತು.

ನೀರಿನಲ್ಲಿ ಸಿಲುಕಿದ್ದ ಜನರನ್ನು ಸುರಕ್ಷಿತ ನೆಲೆಗಳಿಗೆ ತಲುಪಿಸುವುದು ಸರಕಾರದ ಮುಂದಿದ್ದ ದೊಡ್ಡ ಸವಾಲಾಗಿತ್ತು. ಮೆಹಸಾಣಾ ಜಿಲ್ಲೆಯ ವಿಭಾಗ ಸಂಪರ್ಕ ಪ್ರಮುಖರಾಧ ಡಾ. ನಿಖಿಲ್ ಹೇಳುವಂತೆ- ಸೇನೆಯ ತುಕಡಿಗಳು ತಲುಪುವ ಮೊದಲೇ ಸ್ವಯಂಸೇವಕರು ಹಗ್ಗದ ಸಹಾಯದಿಂದ ಸಂತ್ರಸ್ತರನ್ನು ನೀರಿನಿಂದ ಮೇಲೆತ್ತುವ ಕೆಲಸ ಆರಂಭಿಸಿದ್ದರು. NDRF ನ ಪಡೆಯ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಲ್ಲಿ ಸ್ವಯಂಸೇವಕರು ಸಂಪೂರ್ಣ ಸಹಕಾರ ನೀಡಿದ್ದರು. ಅಡಾನೀ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸ್ವಯಂಸೇವಕ ಜಯ ಪಟೇಲರಂತೂ ತಮ್ಮ ಜೊತೆಗಾರರೊಂದಿಗೆ ಮೆಡಿಕಲ್ ಕಿಟ್ ಹಿಡಿದು ನೆರೆಪೀಡಿತ ಪ್ರದೇಶದ ಆದೇಶಪುರ ಮತ್ತು ರಾಧನಪುರಗಳ ಕಡೆಗೆ ಹೊರಟರು. ಅವರೆಲ್ಲ ದುರ್ಗಮವಾದ ದಾರಿಯಲ್ಲಿ ಕೆಲ ಕಿಲೋಮೀಟರುಗಳನ್ನು, ತಲೆ ಮೇಲೆ ಮೆಡಿಕಲ್ ಕಿಟ್ಟುಗಳನ್ನು ಹೊತ್ತು ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾಯಿತು. ಅಂತೂ ಇಂತೂ ನೆರೆಹಾವಳಿಗೆ ತುತ್ತಾದ ಊರು ತಲುಪಿದ ಈ ಸ್ವಯಂಸೇವಕರ ಉತ್ಸಾಹೀ ಯುವಪಡೆಯು ಸಂತ್ರಸ್ತರ ಸೇವೆಗಾಗಿ ಹಗಲಿರುಳೂ ಸೆಣಸಿತು. ಪ್ರವಾಹದ ರಭಸಕ್ಕೆ ತೇಲಿ ಬಂದ ಕಸಕಡ್ಡಿ ಕೆಸರುಗಳಿಂದ ಆವೃತವಾದ ಆ ಹಳ್ಳಿಗಳಲ್ಲಿ ವಿದ್ಯುತ್ ಪೂರೈಕೆಯೂ ಸ್ಥಗಿತಗೊಂಡಿತ್ತು. ಮೊಬೈಲ್ ನೆಟ್ವರ್ಕುಗಳೂ ಸಿಗುತ್ತಿರಲಿಲ್ಲ. ಆದಾಗ್ಯೂ ಎಲ್ಲ ಅಡೆತಡೆಗಳನ್ನು ನಿವಾರಿಸುತ್ತಾ ಟಾರ್ಚ್ ಬೆಳಕಿನಲ್ಲೇ ಸಂತ್ರಸ್ತರಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಲಾಯಿತು. ಆ ತರುಣ ಸ್ವಯಂಸೇವಕರು ತಮಗೆ ಎದುರಾದ ಎಲ್ಲ ಕಷ್ಟಗಳನ್ನೂ ಬದಿಗಿರಿಸಿ, ಸಂಘದ ಶಾಖೆಯು ಕಲಿಸಿದ ಮಾನವಸೇವೆಯ ಮಂತ್ರವನ್ನು ಚಾಚೂತಪ್ಪದೆ ಪಾಲಿಸಿ ತೋರಿಸಿದರು. ವಿಭಾಗ ಸೇವಾ ಪ್ರಮುಖರಾದ ನಟೂಭಾಯೀಜೀ ಜೋಶಿ ಹೇಳುವಂತೆ ಈ ಪುಣ್ಯಕಾರ್ಯದಲ್ಲಿ ಅಖಿಲ ವಿಶ್ವ ಗಾಯಿತ್ರಿ ಪರಿವಾರ, ಸಲಾರಾಮ ಮಂದಿರ ಟ್ರಸ್ಟ್, ನಡೀಪಾದದ ಸಂತರಾಮ ಮಂದಿರ, ಆರ್ಟ್ ಆಫ್ ಲಿವಿಂಗ್, ರಾಮದೇವ್ ಪತಂಜಲಿ, ರಾಮಕೃಷ್ಣ ಮಿಷನ್, ಜೈ ಗುರುದೇವ್, ದಾದಾನೀವಾಡಿ ಮುಂತಾದ ಅನೇಕ ಸಾಮಾಜಿಕ/ ಧಾರ್ಮಿಕಸಂಸ್ಥೆಗಳು RSS ನ ನೇತೃತ್ವದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸಿವೆ.


ಸಂಪರ್ಕ- ನಟೂ ಭಾಯೀ


ಸಂಪರ್ಕ ಸಂಖ್ಯೆ- 9429259143

763 Views
अगली कहानी