सब्‍सक्राईब करें

क्या आप ईमेल पर नियमित कहानियां प्राप्त करना चाहेंगे?

नियमित अपडेट के लिए सब्‍सक्राईब करें।

ಚಿತಾಗ್ನಿ - ಅಂತಿಮ ಸಂಸ್ಕಾರದ ಸಂಚಾರಿ ಘಟಕ

ಶ್ರೀಮತಿ ಮೇಘ ಪ್ರಮೋದ್ | ಕೇರಳ

parivartan-img

6 ಮಾರ್ಚ್ 2021ರ ಸಂದರ್ಭ, ಕೇರಳದ ಅಂಡೋರಕೋನಮ್ ಎಂಬ ಪುಟ್ಟ ಹಳ್ಳಿಯ ವಾಸಿಗಳಾದ ರಂಗರಾಜನ್(ಹೆಸರು ಬದಲಿಸಲಾಗಿದೆ) ಕೊರೋನದಿಂದಾಗಿ ಕೊನೆ ಉಸಿರೆಳೆದಿದ್ದರು. ವಿಪರ್ಯಾಸವೆಂದರೆ ಅವರ ಕುಟುಂಬವು ಈ ರೋಗದೊಂದಿಗಿನ ಹೋರಾಟಕ್ಕಿಂತ ಮೃತರ ಅಂತ್ಯಕ್ರಿಯೆಗಾಗಿ ನಡೆಸಿದ ಹೋರಾಟವೇ ದೊಡ್ಡದಾಗಿತ್ತು. ರಂಗರಾಜನ್ ಅವರ ಕುಟುಂಬ ಎಲ್ಲಾ ಪ್ರಯತ್ನಗಳನ್ನು ಮಾಡಿ ಸೋತಿದ್ದರು, ಆದರೆ ಅವರಿಗೆ ಯಾವುದೇ ಸ್ಮಶಾನದಲ್ಲೂ ಅಂತ್ಯಸಂಸ್ಕಾರಕ್ಕಾಗಿ ಸ್ಥಳ ದೊರೆತಿರಲಿಲ್ಲ. ಸೋತು ನಿಂತಿದ್ದ ಕುಟುಂಬಸ್ತರು ಕೇರಳದ ಸೇವಾ ಭಾರತಿಯ ಸಹಾಯ ಕೋರಿದರು. ಪರಿಣಾಮವಾಗಿ, ಕೆಲವೇ ಘಂಟೆಗಳಲ್ಲಿ ವ್ಯಾನ್ ರೂಪದಲ್ಲಿ ಮೊಬೈಲ್ ಅಂತಿಮ ಸಂಸ್ಕಾರ ಘಟಕವು ಅವರ ಮನೆ ಬಾಗಿಲಿಗೆ ಬಂದಿತು. ರಂಗರಾಜನ್ ಅವರ ಸಂಬಂಧಿಕರು ಕಾರ್ಯಕರ್ತರ ನೆರವಿನೊಂದಿಗೆ ಎರಡು ಎಲ್ ಪಿ ಜಿ ಸಿಲಿಂಡರ್ ಗಳನ್ನು ಬಳಸಿ ಅವರ ಅಂತಿಮ ವಿಧಿಗಳನ್ನು ನೆರವೇರಿಸಿದರು.

ಕೇರಳದ ಸೇವಾ ಭಾರತಿಯ ಈ ಚಿತಾಗ್ನಿ ಯೋಜನೆಯು ಸೇವಾ ಇಂಟರ್ನ್ಯಾಷನಲ್ ನ ಸಹಯೋಗದೊಂದಿಗೆ ನಡೆಸಲ್ಪಡುತ್ತಿದ್ದು, ರಾಜ್ಯದ 13 ಜಿಲ್ಲೆಗಳಲ್ಲಿ ತಮ್ಮ ಸಂಬಂಧಿಕರ ಅಂತ್ಯಕ್ರಿಯೆಯನ್ನು ಮನೆಯ ಹಿತ್ತಲಿನಲ್ಲೇ ಮಾಡಬೇಕಾದ ಪರಿಸ್ಥಿತಿ ಒದಗಿಬಂದಿದ್ದ ಕುಟುಂಬಗಳಿಗೆ ವರದಾನವಾಗಿದೆ. ಚಿತಾಗ್ನಿ ಒಂದು ವಿಶಿಷ್ಟ ಯೋಜನೆಯಾಗಿದ್ದು ಅಂತಿಮ ವಿಧಿಗಳಿಗೆ ಕಟ್ಟಿಗೆಯ ಅವಶ್ಯಕತೆ ಇರುವುದಿಲ್ಲ ಹಾಗಾಗಿ ಈ ಯೋಜನೆಯು ಪರಿಸರ ಸ್ನೇಹಿ ಯೋಜನೆಯಾಗಿದೆ ಎಂದು ಕೇರಳ ಸೇವಾ ಭಾರತಿಯ ಅಧ್ಯಕ್ಷರಾದ ಕಿರಣ್ ಕುಮಾರ್ ಜೀ ಹೇಳುತ್ತಾರೆ.


ಮೃತ್ಯು ಕಷ್ಟವನ್ನೂ ಹೊತ್ತುತರುತ್ತದೆ, ಕುಟುಂಬದಿಂದ ಯಾರಾದರು ಶಾಶ್ವತವಾಗಿ ಕಣ್ಮರೆಯಾದರೆ ಇಡೀ ಕುಟುಂಬ ದುಃಖದ ಸಾಗರದಲ್ಲಿ ಮುಳುಗುತ್ತದೆ. ಅಂತಹಾ ದುಃಖದ ಸಂದರ್ಭದಲ್ಲೂ ಸಂಪೂರ್ಣ ವಿಧಿ ವಿಧಾನದೊಂದಿಗೆ ಗೌರವಪೂರ್ವಕವಾಗಿ ಮೃತರ ಅಂತ್ಯ ಸಂಸ್ಕಾರವೆನ್ನುವ ಈ ಕಠೋರ ವಿಧಿಯನ್ನು ನಿರ್ವಹಿಸುವುದು ಮನುಷ್ಯನ ಕರ್ತವ್ಯವಾಗಿರುತ್ತದೆ.  ಆದರೆ ಅಂತ್ಯಸಂಸ್ಕಾರಕ್ಕೆ ಎರಡು ಗಜ ಭೂಮಿಯೇ ದೊರೆಯದಿದ್ದರೆ..? ಕೇರಳದ ಸಣ್ಣ ಸಣ್ಣ ಸೇವಾ ಬಸ್ತಿಗಳಲ್ಲಿ ವಾಸಿಸುವ ಜನರು ಕಳೆದ ಹಲವು ವರ್ಷಗಳಿಂದ ಈ ಮನ ಕದಡುವ ವಿದ್ರಾವಕ ನೋವನ್ನು ಅನುಭವಿಸುತ್ತಿದ್ದಾರೆ. ಅಂತಿಮ ಸಂಸ್ಕಾರಕ್ಕೆ ಅವರಿಗೆ ಸ್ಮಶಾನದಲ್ಲಿ ಜಾಗ ದೊರೆಯುತ್ತಿರಲಿಲ್ಲ, ಅಂತಹ ಪರಿಸ್ಥಿತಿಯಲ್ಲಿ ಅವರು ಮೃತ ಪ್ರೀತಿಪಾತ್ರರಿಗೆ ತಮ್ಮ ಸಣ್ಣ ತುಂಡು ಭೂಮಿಯಲ್ಲೆ ಅಂತಿಮ ನಮನ ಸಲ್ಲಿಸುತ್ತಿದ್ದರು, ಇನ್ನು ಕೆಲವರು ನಿರ್ಜನ ಸ್ಥಳದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲು 10ಕಿ.ಮೀ ನಡೆದು ಸಾಗುತ್ತಿದ್ದರು.


ಕರೋನಾ ಸಮಯದಲ್ಲಂತೂ ಈ ಸಮಸ್ಯೆ ಹೆಚ್ಚು ತೀವ್ರವಾಗಿತ್ತು. ಸಾವಿನ ಸಂಖ್ಯೆ ಎಷ್ಟರ ಮಟ್ಟಿಗೆ ಏರಿತ್ತು ಎಂದರೆ, ಮೃತ ದೇಹಗಳನ್ನು 3 ದಿನಗಳ ಕಾಲ ಮನೆಯಲ್ಲೇ ಇರಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು. ಇಂತಹ ಕುಟುಂಬಗಳಿಗೆ ನೆರವಾಗಲೆಂದೆ ಕೇರಳದ ಸೇವಾ ಭಾರತಿ ಸೇವಾ ಇಂಟರ್ನ್ಯಾಷನಲ್ ಸಹಯೋಗದೊಂದಿಗೆ 2019ರಲ್ಲಿ ಚಿತಾಗ್ನಿ ಯೋಜನೆಯನ್ನು ಪ್ರಾರಂಭಿಸಿತು.ಸ್ಟಾರ್ ಚೇರ್ ಮಾನಿಫ್ಯಾಕ್ಚರರ್ಸಂಸ್ಥೆಯ ಮೂಲಕ ತಯಾರಿಸಲಾದ ಈ ವಿಶಿಷ್ಟವಾದ ಮೊಬೈಲ್ ಅಂತಿಮ ಸಂಸ್ಕಾರ ಘಟಕವನ್ನು 13 ಜಿಲ್ಲೆಗಳಲ್ಲಿ ಕೇರಳದ ಸೇವಾ ಭಾರತಿಯು ಅವಶ್ಯಕತೆ ಇರುವವರಿಗೆ ಉಚಿತವಾಗಿ ಒದಗಿಸುವ ಕಾರ್ಯವನ್ನು ಮಾಡುತ್ತಿದೆ.

ಇನ್ನು ಇದರ ಇತಿಹಾಸದ ಬಗ್ಗೆ ಹೇಳುವುದಾದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೊಟ್ಟಾಯಂ ವಿಭಾಗದ ಸಂಘಚಾಲಕರಾಗಿದ್ದ ಡಾ.ಪಿ.ಚಿದಂಬರನಾಥ್ ಅವರು ಈ ಸಮಸ್ಯೆಯನ್ನು ಪರಿಹರಿಸಲು 'ಮೊಬೈಲ್ ಸಂಸ್ಕಾರ ಘಟಕ' ಸ್ಥಾಪಿಸಲು ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಲೇ ಇದ್ದರು.


ಆದರೆ ಅವರ ಜೀವಿತಾವಧಿಯಲ್ಲಿ ಅದು ಸಾಧ್ಯವಾಗಿರಲಿಲ್ಲ, ಅವರು ನಿಧನರಾದ ಒಂದು ವರ್ಷದ ನಂತರ, ಅಲ್ಲಿನ ಸ್ವಯಂಸೇವಕರು ಮೊದಲ 'ಮೊಬೈಲ್ ಸಂಸ್ಕಾರ ಘಟಕ'ವನ್ನು ಪ್ರಾರಂಭಿಸಿ ಅವರ ಕನಸನ್ನು ನನಸಾಗಿಸಿದರು. ಚಿತಾಗ್ನಿಯು ವಿದ್ಯುತ್ ಸ್ಮಶಾನದ ಒಂದು ರೂಪ. ಇದರಲ್ಲಿ ಮೃತ ದೇಹವನ್ನು ಸುಡಲು ಒಂದು ಅಥವಾ ಒಂದೂವರೆ ಎಲ್.ಪಿ.ಜಿ. ಸಿಲಿಂಡರ್ ಅಗತ್ಯವಿದೆ. ಅಂದರೆ ಕೇವಲ 2000 ರಿಂದ 2500 ರೂಪಾಯಿಯಲ್ಲಿ  ಅಂತಿಮ ವಿಧಿವಿಧಾನಗಳನ್ನು ವಿಧಿವತ್ತಾಗಿ ನೆರವೇರಿಸಬಹುದು. ಅಷ್ಟೇ ಅಲ್ಲ ಮರದ ಬಳಕೆ ಮಾಡದಿರುವುದರಿಂದ ಪರಿಸರವೂ ಸುರಕ್ಷಿತವಾಗಿದೆ. ಕಡು ಬಡ ಕುಟುಂಬಗಳಿಗಾಗಿ, ಸೇವಾ ಭಾರತಿ ಕೇರಳವು 13 ಜಿಲ್ಲೆಗಳಲ್ಲಿ ನಡೆಸುತ್ತಿರುವ ಈ ಯೋಜನೆಯನ್ನು ಭವಿಷ್ಯದಲ್ಲಿ ದಕ್ಷಿಣ ಭಾರತದ 100 ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆಯನ್ನು ಮಾಡಲಾಗಿದೆ. 

776 Views
अगली कहानी